ಲೋಕೋಪಯೋಗಿ ಇಲಾಖೆಯ ಅಪೇಂಡಿಕ್ಸ್ ಸಿ ಲೆಕ್ಕಶಿರ್ಷಿಕೆಯ ಯೋಜನೆಯಡಿ ಸುಮಾರು ೪.೫ ಕೋಟಿ ರೂಗಳ ವೆಚ್ಚದಲ್ಲಿ ತಾಲ್ಲೂಕಿನ ಜಂಗಮಕೋಟೆ- ಶಿಡ್ಲಘಟ್ಟ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಎಂ.ರಾಜಣ್ಣ ಗುರುವಾರ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಿಂದ ಆನೂರು ಗ್ರಾಮದವರೆಗಿನ ರಸ್ತೆ ಈ ಹಿಂದೆ ಬಹಳಷ್ಟು ಕಿರಿದಾಗಿದ್ದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಬಹುತೇಕ ರಸ್ತೆಯ ಮಣ್ಣಿನ ಕಾಮಗಾರಿ ಮುಗಿದಿದ್ದು ಸುಮಾರು ೩ ಕಿ.ಮೀ ನಷ್ಟು ಡಾಂಬರೀಕರಣ ಕಾಮಗಾರಿಯೂ ಮುಗಿದಿದೆ ಎಂದರು.
ಈ ರಸ್ತೆಯಲ್ಲಿ ಸಂಚಾರ ಮಾಡುವಂತಹ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ರಸ್ತೆ ಕಾಮಗಾರಿಯ ಗುಣಮಟ್ಟದಲ್ಲಿ ಸ್ಥಳೀಯ ನಾಗರೀಕರು ಸೇರಿದಂತೆ ಗುತ್ತಿಗೆದಾರರು ರಾಜಿಯಾಗದೇ ಗುಣಮಟ್ಟದ ಕಾಮಗಾರಿಗಳನ್ನು ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಸ್ಥಳೀಯ ಮುಖಂಡರು, ನಾಗರಿಕರು ಕೂಡಾ ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಚ್ಚರವಹಿಸಿದ್ದರಿಂದ ಗುಣಮಟ್ಟದ ರಸ್ತೆ ಕಾಮಗಾರಿ ಆಗಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ತಾವು ಶಾಸಕರಾಗಿ ಮೂರು ವರ್ಷ ಪೂರ್ಣಗೊಂಡಿದ್ದು ತಮ್ಮ ಅವಧಿಯಲ್ಲಿ ಕ್ಷೇತ್ರದ ಶೇ. ೬೫ ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸೇರಿದಂತೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಇನ್ನುಳಿದ ೩೫ ರಷ್ಟು ಭಾಗದ ಕೆಲಸಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಲೊಕೋಪಯೋಗಿ ಇಲಾಖೆಯ ಎಇಇ ಲೋಕೇಶ್, ಇಂಜಿನಿಯರ್ ಮಹೇಂದರ್, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -