ರೈತರು ಬೆಳೆದ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದೆ. ಆದರೆ ಕೊಳ್ಳುವವರಿಲ್ಲದ ಕಂಗಾಲಾದ ರೈತರ ನೆರವಿಗೆ ತಾಲ್ಲೂಕಿನ ಭಕ್ತರಹಳ್ಳಿ ಮೂಲದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಗ್ರಾಹಕರೊಡನೆ ರೈತರಿಗೆ ನೇರ ಸಂಪರ್ಕವಿಲ್ಲ. ಹೀಗಾಗಿ ದಲ್ಲಾಳಿಗಳ ಮೇಲೆ ಅವಲಂಬಿತರಾಗಿದ್ದ ರೈತರಿಗೆ ಇಂದು ದಿಕ್ಕು ತೋಚದಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇವರು ಪ್ರಯತ್ನ ಪಟ್ಟಿದ್ದಾರೆ.
“ಪ್ರಾರಂಭಿಕವಾಗಿ ಬೆಂಗಳೂರಿನ ವಿವಿಧ ಬಡಾವಣೆ ನಿವಾಸಿಗಳ ಸಂಘಗಳೊಂದಿಗೆ ಮಾತುಕತೆ ನಡೆಸಿ ರೈತರಿಗೆ ನೆರವಾಗುವಂತೆ ಮನವಿ ಮಾಡಿದೆವು. ಅದೇ ರೀತಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರೊಡನೆ ಚರ್ಚಿಸಿ ಅವರಿಗೂ ನಷ್ಟವಾಗದಂತೆ ಗ್ರಾಹಕರಿಗೂ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತೆ ಪ್ರತಿ ಕೆ.ಜಿ. ಶರದ್ ತಳಿಯ ದ್ರಾಕ್ಷಿಗೆ 55 ರೂಪಾಯಿಯಂತೆ ಮಾರಾಟ ಮಾಡಲು ವ್ಯವಸ್ಥೆಗೊಳಿಸಿದೆವು” ಎಂದು ಭಕ್ತರಹಳ್ಳಿ ಅಂಬರೀಷ್ ತಿಳಿಸಿದರು.
“ಮೊದಲ ಪ್ರಯತ್ನವಾಗಿ ಮಂಗಳವಾರ ಬೆಂಗಳೂರಿನ ಸಹಕಾರ ನಗರ ನಿವಾಸಿಗಳ ಸಂಘದ ಸಹಯೋಗದಲ್ಲಿ ಗ್ರಾಹಕರಿಗೆ ನೇರವಾಗಿ ಕಡಿಮೆ ಬೆಲೆಯಲ್ಲಿ ದ್ರಾಕ್ಷಿ ಹಣ್ಣು ಮಾರಾಟ ಮಾಡಲು ಚಾಲನೆ ನೀಡಲಾಯಿತು. ಇದೇ ಹಣ್ಣಿಗೆ ಹೊರಗಿನ ವಿವಿಧ ಮಾರಾಟ ಕೇಂದ್ರಗಳಲ್ಲಿ 100 ರಿಂದ 120 ರೂಪಾಯಿ ಬೆಲೆ ಇದೆ. ರೈತರು ಮೊದಲೇ ತೂಕ ಮಾಡಿ ತಂದ ದ್ರಾಕ್ಷಿಯನ್ನು ಬೆಳಗ್ಗೆ 7 ರಿಂದ 9 ರವರೆಗೆ ಮಾತ್ರ ಮಾರಾಟಕ್ಕೆ ಇಟ್ಟಿದ್ದರು.
ಕರೋನಾ ಸೋಂಕು ತಡೆಗಟ್ಟಲು ಗ್ರಾಹಕರು ಸಾಮಾಜಿಕ ಅಂತರವನ್ನೂ ಸಹ ಕಾಪಾಡುವಲ್ಲಿ ಜಾಗ್ರತೆ ವಹಿಸಲಾಗಿದೆ. ಈ ವ್ಯವಸ್ಥೆಯು ಕರೋನಾ ಲಾಕ್ ಡೌನ್ ಮುಗಿಯುವ ವರೆಗೂ ಮುಂದುವರೆಯಲಿದೆ. ಈ ಮೊದಲು ಹೆಚ್ಚಿನ ಲಾಭ ಮಧ್ಯವರ್ತಿಗಳ ಪಾಲಾಗುತ್ತಿತ್ತು. ನೇರ ಮಾರಾಟದಿಂದ ಕಡಿಮೆ ಬೆಲೆಯಲ್ಲಿ ತಾಜಾ ಹಣ್ಣುಗಳು ಸಿಗುತ್ತಿರುವುದರಿಂದ ಅನೇಕ ಗ್ರಾಹಕರು ಸಂತಸ ವ್ಯಕ್ತಪಡಿಸಿದರು” ಎಂದು ಅವರು ಹೇಳಿದರು.
ಇದೇ ರೀತಿ ಹೆಬ್ಬಾಳ ಕೆಂಪಾಪುರ ಬಡಾವಣೆ ನಿವಾಸಿಗಳೊಂದಿಗೂ ಮಾತುಕತೆಯಾಗಿದ್ದು ಬುಧವಾರದಿಂದ ಅಲ್ಲಿಯೂ ಮಾರಾಟಕ್ಕೆ ವ್ಯವಸ್ಥೆಗೊಳಿಸಲಾಗಿದೆ. ವಿವಿಧ ಬಡಾವಣೆ ನಿವಾಸಿಗಳು ಈ ವ್ಯವಸ್ಥೆಗೆ ಕೈ ಜೋಡಿಸುವುದಾಗಿ ಇವರಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ. ಕೆ. ನಾರಾಯಣ ಗೌಡ, ಸದಸ್ಯರಾದ ಡಾ. ಬಿ.ಕೆ. ಕೃಷ್ಣಮೂರ್ತಿ, ಡಾ.ಗೋಪಾಲ್, ಡಾ. ಕುಮಾರ್ , ಭಕ್ತರಹಳ್ಳಿ ಅಂಬರೀಷ್ ಹಾಗೂ ನಿವಾಸಿಗಳ ಸಂಘದ ಸಂತೋಷ್, ಸಂತೆ ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







