ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿಯೂ ಲಾಕ್ ಡೌನ್, ಸೀಲ್ ಡೌನ್ ಜಾರಿಯಲ್ಲಿದ್ದರೂ ಬೆಂಗಳೂರಿನಿಂದ ನಗರಕ್ಕೆ ರಾತ್ರೋ ರಾತ್ರಿ ವಲಸೆ ಬಂದು ಮನೆಯಲ್ಲಿ ಸೇರಿಕೊಂಡಿದ್ದ 8 ಮಂದಿಯನ್ನು ನಗರಸಭೆ ಆಯುಕ್ತ ತ್ಯಾಗರಾಜ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ವಲಸಿಗರು ಬಂದಿದ್ದ ಅವರ ವಾಹನದಲ್ಲಿಯೇ ಶನಿವಾರ ವಾಪಸ್ ಬಂದಕಡೆಗೆ ಕಳುಹಿಸಿದರು.
ನಗರದ ಖಾಜಿ ರಸ್ತೆಯ ಮನೆಗೆ ಶುಕ್ರವಾರ ತಡರಾತ್ರಿ 3 ಗಂಟೆ ಸಮಯದಲ್ಲಿ ಕ್ವಾಲಿಸ್ ವಾಹನದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 8 ಮಂದಿ ಸಂಬಂಧಿಕರು ಬಂದಿದ್ದು, ಅಕ್ಕ ಪಕ್ಕದ ಜನತೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆ ಶನಿವಾರ ಬೆಳಗ್ಗೆ ನಗರಸಭೆ ಪೌರಾಯುಕ್ತ ತ್ಯಾಗರಾಜ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಎಂಟು ಮಂದಿಯ ಆರೋಗ್ಯ ತಪಾಸಣೆ ನಡೆಸಿದರು. ನಂತರ ಎಲ್ಲಿಂದ ಬಂದಿರುವಿರೋ ಅಲ್ಲಿಗೆ ಹೊರಡುವಂತೆ ಸೂಚಿಸಿದರು. ಬೆಂಗಳೂರಿನ ಜಯನಗರದ ಸೋಮೇಶ್ವರ ಬಡಾವಣೆಯಿಂದ ಬಂದಿರುವುದಾಗಿ ವಲಸಿಗರು ಮಾಹಿತಿ ನೀಡಿದರು.
ನೆರೆಹೊರೆಯವರಲ್ಲಿ ಆತಂಕ :
ಜಿಲ್ಲಾ ಕೇಂದ್ರ ಸ್ಥಾನ ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಒಂದೇ ದಿನ 3 ಕೊರೋನಾ ಪ್ರಕರಣಗಳು ಪತ್ತೆಯಾಗಿರುವ ಸುದ್ದಿ ತಿಳಿದು ಭಯಬೀತರಾಗಿರುವ ಜನತೆಗೆ ಬಿಗಿ ಲಾಕ್ಡೌನ್, ಸೀಲ್ ಡೌನ್ ನಡುವೆಯೂ ರಾತ್ರೋ ರಾತ್ರಿ ಆಗುಂತಕರು ಬೆಂಗಳೂರಿನಿಂದ ಶಿಡ್ಲಘಟ್ಟಕ್ಕೆ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದ್ದು, ಹೊರಗಿನವರು ಬರುವುದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಮಾತಿನ ಚಕಮಕಿ :
ರಾತ್ರೋ ರಾತ್ರಿ ಬೆಂಗಳೂರಿನಿಂದ ನಗರಕ್ಕೆ ಬಂದಿದ್ದ ವಲಸಿಗರನ್ನು ಭೇಟಿ ಮಾಡಲು ಹೊರಟ ಅಧಿಕಾರಿಗಳು ಹಾಗೂ ವಲಸಿಗರ ಸಂಬಂಧಿಕರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ತಿಂಗಳುಗಟ್ಟಲೇ ಕೆಲಸ ಕಾರ್ಯ ಇಲ್ಲದೇ ಮಕ್ಕಳು ಬೇರೆಲ್ಲೋ ಹಸಿವಿನಿಂದ ಬಳಲುತ್ತಿದ್ದು ರಾತ್ರಿಯಷ್ಟೇ ಮನೆಗೆ ಬಂದಿದ್ದಾರೆ. ಇದೀಗ ತಾವು ಬಂದು ನಮ್ಮ ಮನೆ ಮಕ್ಕಳನ್ನು ಹೊರಗೆ ಕಳುಹಿಸಿತ್ತಿದ್ದೀರಿ. ಅವರು ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂದು ಖ್ಯಾತೆ ತೆಗೆದರು.
ಅಧಿಕಾರಗಳು, ನಾವು ಬಂದಿರುವುದು ನಿಮ್ಮ ಆರೋಗ್ಯ ಕಾಪಾಡುವ ಜೊತೆಗೆ ನಗರದ ಜನತೆಯ ಆರೋಗ್ಯ ಕಾಪಾಡುವ ಸಲುವಾಗಿ ದಯವಿಟ್ಟು ಲಾಕ್ ಡೌನ್ ಅವಧಿ ಮುಗಿಯುವವರೆಗೂ ಎಲ್ಲರುತ್ತೀರೋ ಅಲ್ಲಿಯೇ ಇರಿ, ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಿ ಕೊರೋನಾ ಹರಡಬೇಡಿ ಎಂದು ಮನವರಿಕೆ ಮಾಡಿಕೊಟ್ಟರು. ಅವರಿಗೆ ತಿಂಡಿ, ಊಟ ಕೊಟ್ಟು, ಆಹಾರ ಧಾನ್ಯಗಳ ಕಿಟ್ ನೀಡಿ, ರಾತ್ರಿ ಬಂದಿದ್ದ ಅದೇ ಕ್ವಾಲಿಸ್ ವಾಹನದಲ್ಲಿ ಎಂಟು ಮಂದಿಯನ್ನು ವಾಪಸ್ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಪಿ.ಮುರಳಿ, ಆರೋಗ್ಯ ಇಲಾಖೆಯ ಶುಶ್ರೂಷಕಿ ವಿಜಯಾ, ಸಿಬ್ಬಂದಿ ಬಿ.ಲೋಕೇಶ್, ವಿ.ಕೀರ್ತಿ ಹಾಜರಿದ್ದರು.







