ನಗರದ ಪ್ರವೇಶದ್ವಾರದಲ್ಲಿರುವ ಕಾಲುವೆಯಲ್ಲಿನ ಕೊಳಚೆಯನ್ನು ನಿರ್ಮೂಲನೆ ಮಾಡಲು ಒಂದು ಕೋಟಿ ರೂಗಳ ವೆಚ್ಚದಲ್ಲಿ ಕೆರೆ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಯ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಐ.ಡಿ.ಎಸ್.ಎಂ.ಟಿ ಯೋಜನೆಯಡಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಸಂಕೀರ್ಣವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಪ್ರವೇಶದಲ್ಲಿ ಅಮ್ಮನಕೆರೆ ಮತ್ತು ಗೌಡನಕೆರೆಯನ್ನು ಸಂಪರ್ಕಿಸುವ ಕಾಲುವೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ಧಿ ಪಡಿಸಲು 75 ಲಕ್ಷ ರೂಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆಶ್ರಯ ಯೋಜನೆಯಡಿ ಮನೆಯಿಲ್ಲದವರಿಗಾಗಿ 1500 ಮನೆಗಳನ್ನು ನಿರ್ಮಿಸಿಕೊಡಲು ಪ್ರಕ್ರಿಯೆ ಪ್ರಾರಂಭವಾಗಿದೆ. ನಗರೋತ್ಥಾನ ಅಭಿವೃದ್ಧಿಗಾಗಿ 15 ಕೋಟಿ ಹಣ ಬರಲಿದ್ದು ನಗರಸಭೆಯ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.
2010–11ನೇ ಸಾಲಿನ ಐ.ಡಿ.ಎಸ್.ಎಂ.ಟಿ ಯೋಜನೆಯಡಿಯಲ್ಲಿ ಮಂದಗತಿಯಲ್ಲಿ ನಿರ್ಮಣವಾದ 49 ಲಕ್ಷ ರೂಗಳ 29 ಮಳಿಗೆಗಳ ವಾಣಿಜ್ಯ ಸಂಕೀರ್ಣವನ್ನು ಐದು ವರ್ಷಗಳ ನಂತರ ಉದ್ಘಾಟನೆಯನ್ನು ನೆರವೇರಿಸಿ ಮುಂದಿನ ತಿಂಗಳಿನಿಂದ ಅಂಗಡಿ ಮಳಿಗೆಗಳ ಹರಾಜು ನಡೆಸುವುದಾಗಿ ನುಡಿದರು.
ನಗರಸಭಾ ಆಯುಕ್ತ ಎಚ್.ವಿ.ಹರೀಶ್, ಯೋಜನಾ ನಿರ್ದೇಶಕಿ ಎಂ.ರೇಣುಕಾ, ನಗರಸಭೆ ಅಧ್ಯಕ್ಷೆ ಮುಷ್ಟರಿ ತನ್ವೀರ್ ಪಾಷ, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್, ನಗರಸಭಾ ಸದಸ್ಯರಾದ ವೆಂಕಟಸ್ವಾಮಿ, ಅಫ್ಸರ್ ಪಾಷ, ಜಬೀವುಲ್ಲ, ಗಫೂರ್, ಸಮೀರ್ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -