ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣನಿಧಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳನ್ನು ಉದ್ಘಾಟಿಸಿ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಶಿಕ್ಷಕರಿಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಪಠ್ಯಚಟುವಟಿಕೆಗಳು ಅತ್ಯಗತ್ಯವಾಗಿವೆ. ವರ್ಷವಿಡೀ ತರಗತಿ ಬೋಧನೆಯಲ್ಲಿ ನಿರತರಾಗಿದ್ದು, ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಮಕ್ಕಳ ಕಲಿಕೆಗೆ ಪೂರಕವಾಗಿ ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಗಳ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತಂದುಕೊಂಡು ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗುವಂತೆ ಬೋಧನೆ-ಕಲಿಕೆ ಪ್ರಕ್ರಿಯೆಯಲ್ಲಿ ಸಮಯೋಚಿತವಾಗಿ ಬಳಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಯೋಜಕ ಭಾಸ್ಕರಗೌಡ ಮಾತನಾಡಿ, ಶಿಕ್ಷಕರು ತಮ್ಮಬೋಧನಾ ಅನುಭವದೊಂದಿಗೆ ಹೊಸಹೊಸ ಆವಿಷ್ಕಾರಗಳು ವೃತ್ತಿಪಂಡಿತ್ಯಕ್ಕೆ ಮನೆಮಾಡಿಕೊಡುತ್ತವೆ. ಸಹಪಠ್ಯಚಟುವಟಿಕೆಗಳು ಪರಿಣಾಮಕಾರಿ ಬೋಧನೆಗೆ ಸಹಕಾರಿಯಾಗಿವೆ. ಚಿತ್ರಕಲೆ, ರಾಗಬದ್ಧವಾಗಿ ಪದ್ಯಗಳ ಬೋಧನೆ, ಕಲಿಕೋಪಕರಣಗಳ ತಯಾರಿಕೆ ಮುಂತಾದ ಸ್ಪರ್ಧೆಗಳು ಶಿಕ್ಷಕರನ್ನು ಮತ್ತಷ್ಟು ವೃತ್ತಿಪರರನ್ನಾಗಿಸುತ್ತವೆ ಎಂದರು.
ತಾಲ್ಲೂಕು ಪಂಚಾಯಿತಿ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಶಿಕ್ಷಕರೂ ಸದಾಕಾಲ ಅಧ್ಯಯನಶೀಲರೂ ಕ್ರಿಯಾಶೀಲರೂ ಆಗಿರಬೇಕು. ವಿದ್ಯಾರ್ಥಿಗಳಿಗೆ ಹೊಸವಿಷಯಗಳನ್ನು ಕಲಿಸಲು ತಾವೂ ನಿರಂತರವಾಗಿ ಕಲಿಯಬೇಕು ಎಂದರು.
ಶಿಕ್ಷಕರಿಗಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು.
ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಕೆಂಪಣ್ಣ, ಜಿಲ್ಲಾಪ್ರತಿನಿಧಿ ಟಿ.ವಿ.ಚಂದ್ರಶೇಖರ್, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಖಜಾಂಚಿ ಪಿಳ್ಳಣ್ಣ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರವೀಂದ್ರ, ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಶಿಕ್ಷಕ ಎಂ.ಶಿವಕುಮಾರ್, ಎಚ್.ಎಸ್.ರುದ್ರೇಶಮೂರ್ತಿ, ಸಿಆರ್ಪಿ ಸಿ.ಬಿ.ಪ್ರಕಾಶ್ ಹಾಜರಿದ್ದರು.
- Advertisement -
- Advertisement -
- Advertisement -