ನಗರದ ಸರ್ಕಾರಿ ಬಸ್ ನಿಲ್ದಾಣ ಬಳಿಯ ರಸ್ತೆಯ ಪಕ್ಕದ ಕಾಲುವೆಗಳಲ್ಲಿ ಕಸದ ರಾಶಿ ತುಂಬಿಹೋಗಿದ್ದು, ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಅಲ್ಲೆ ನಿಂತು ಗಬ್ಬು ನಾರುತ್ತಿದೆ. ಇಂತಹ ಅವ್ಯವಸ್ಥೆ ಸೃಷ್ಟಿಯಾಗಲು ಸ್ಥಳೀಯ ನಗರಸಭೆಯ ನಿರ್ಲಕ್ಷ್ಯ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದ ಬಸ್ ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಬಡಾವಣಿಗಳಲ್ಲಿನ ನೀರು ಇದೇ ಕಾಲುವೆ ಮೂಲಕ ಹರಿದು ಹೋಗಬೇಕಾಗಿದೆ. ಆದರೆ ಈ ಕಾಲುವೆಗಳನ್ನು ನಗರಸಭೆಯವರು ಸರಿಯಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ನಗರದ ವಿವಿಧ ಅಂಗಡಿಗಳವರು, ಹೋಟಲ್ಗಳವರು ಪ್ಲಾಸ್ಟಿಕ್ ಕಸವನ್ನು ಹಾಗೂ ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಇಲ್ಲಿ ಹಂದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಂಕ್ರಾಮಿಕ ರೋಗಗಳ ಭೀತಿ: ನಗರದ ವಿವಿಧ ಭಾಗದಲ್ಲಿ ದೊಡ್ಡ ಚರಂಡಿಗಳಲ್ಲಿ ಈ ರೀತಿಯಾಗಿ ಕಸ ಸಂಗ್ರಹಣೆಯಾಗಿ ಗಬ್ಬು ನಾರುತ್ತಿರುವುದರಿಂದ ನಗರ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸೊಳ್ಳೆ ನೋಣಗಳ ಕಾಟ ಜಾಸ್ತಿಯಾಗಿದೆ, ಅದರಲ್ಲೂ ಮಳೆಗಾಲದಲ್ಲಿ ಇದರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಣ್ಣುಮುಚ್ಚಿ ಕುಳಿತ ನಗರಸಭೆ: ನಗರದ ಪ್ರವೇಶದಲ್ಲೇ ಮುಖ್ಯ ರಸ್ತೆಗಳ ಪಕ್ಕದಲ್ಲಿ ಹಾದು ಹೋಗಿರುವ ಚರಂಡಿಗಳಲ್ಲಿ ಕಸ ತುಂಬಿ ತುಳುಕುತ್ತಿದ್ದರೂ ಕಂಡು ಕಾಣದಂತೆ ನಗರಸಭೆ ವರ್ತಿಸುತ್ತಿದೆ. ಮಳೆ ಬಂದರೆ ಚರಂಡಿಯಲ್ಲಿನ ತ್ಯಾಜ್ಯ ಸಮೇತ ಮಳೆ ನೀರು ಮನೆಗೆ ನುಗ್ಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ಬಗ್ಗೆ ನಗರಸಭೆಗೆ ಹಲವು ಭಾರಿ ಮನವಿ ಮಾಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಈ ಭಾಗದ ನಿವಾಸಿಗರು ತಮ್ಮ ಆಳಲು ತೋಡಿಕೊಂಡಿದ್ದಾರೆ.ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಚರಂಡಿಗಳಲ್ಲಿನ ಕಸವನ್ನು ವಿಲೇವಾರಿ ಮಾಡಿ ಸೂಕ್ತ ನಿರ್ವಹಣೆ ಮಾಡಬೇಕಾಗಿದೆ.
- Advertisement -
- Advertisement -
- Advertisement -
- Advertisement -