ನಗರದಲ್ಲಿ ಸುಮಾರು 50 ಸಾರ್ವಜನಿಕ ಗಣೇಶೋತ್ಸವಗಳು ನಡೆದಿದ್ದು, ಪ್ರಮುಖ ರಸ್ತೆಗಳು, ಬಡಾವಣೆಗಳು, ದೇವಾಲಯಗಳು, ಕಿರುರಸ್ತೆಗಳಲ್ಲಿ ವಿವಿಧ ಗಣೇಶ ಮಂಡಳಿಗಳು, ಯುವಕರ ಸಂಘಗಳು, ಪುಟಾಣಿ ಹುಡುಗರು ಪ್ರತಿಷ್ಠಾಪಿಸಿರುವ ಮೂರ್ತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.
ವಾಸವಿ ದೇವಾಲಯ ರಸ್ತೆಯ ವರಸಿದ್ಧಿ ವಿನಾಯಕ ಮಂಡಲಿಯಿಂದ 59ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸುತ್ತಿದ್ದರೆ, ಉಲ್ಲೂರುಪೇಟೆಯ ಪದ್ಮಶಾಲಿ ವಿನಾಯಕ ಗೆಳೆಯರ ಬಳಗ 32ನೇ ವರ್ಷದ ಗಣಪತಿ ಪೂಜಾ ಮಹೋತ್ಸವವನ್ನು ನಡೆಸುತ್ತಿದ್ದಾರೆ. ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ 46 ನೇ ವರ್ಷದ ವಿಘ್ನೇಶ್ವರನ ಆಚರಣೆಯಾದರೆ, ಒಂದನೇ ನಗರ್ತಪೇಟೆಯ ಆಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿಯಿಂದ 40ನೇ ವರ್ಷದ ಪ್ರಯುಕ್ತ ಶಂಖಾರೂಢ ಗಣಪತಿಯನ್ನು ಪೂಜಿಸಲಾಗುತ್ತಿದೆ. ಜೌಗುಪೇಟೆಯ ಸ್ನೇಹ ಯುವಕರ ಸಂಘದ್ದು 17ನೇ ವರ್ಷದ್ದಾದರೆ, ಶಾಮಣ್ಣ ಬಾವಿ ಯುವಕರ ಸಂಘದಿಂದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ 28ನೇ ವರ್ಷದ ಗಣೇಶೋತ್ಸವ ನಡೆಯುತ್ತಿದೆ. ಮಯೂರ ವೃತ್ತದ ಗೆಳೆಯರ ಬಳಗದಿಂದ 23 ನೇ ವರ್ಷದ ಗಣೇಶನ ಉತ್ಸವ ನಡೆದಿದೆ.
ಇವುಗಳೊಂದಿಗೆ ಇನ್ನೂ ಹಲವಾರು ಸಂಘಗಳು, ಯುವಕರು, ಪುಟಾಣಿ ಹುಡುಗರು ಸೇರಿದಂತೆ ಹಲವಾರು ಮಂದಿ ಸಾಂಘಿಕವಾಗಿ ಗಣೇಶನನ್ನು ಇಟ್ಟಿದ್ದಾರೆ.
ಗಣೇಶೋತ್ಸವಗಳಲ್ಲಿ ಸ್ಥಳೀಯ ಮಕ್ಕಳ ಪ್ರತಿಭಾ ಪ್ರದರ್ಶನ, ರಂಗೋಲಿ ಸ್ಪರ್ಧೆಗಳು, ವಿವಿಧ ಪೂಜಾ ಕಾರ್ಯಕ್ರಮಗಳು, ಪ್ರಸಾದ ವಿನಿಯೋಗಗಳು ಸಂಜೆ ವೇಳೆಯಲ್ಲಿ ನಡೆಯುತ್ತಿವೆ.
ಸಾರ್ವಜನಿಕವಾಗಿ ಇಟ್ಟಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಹನುಮಂತಪುರ ಗೇಟ್ ಬಳಿಯ ಕೃಷ್ಣಸ್ವಾಮಿ ದೇವಾಲಯದ ಬಳಿಯ ಕುಂಟೆಯನ್ನು ಪೊಲೀಸರು ನಿಗದಿಪಡಿಸಿದ್ದು, ಸುತ್ತ ಕಟಕಟೆಯನ್ನು ನಿರ್ಮಿಸಿದ್ದಾರೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರನೇ ದಿನ ಅಂದರೆ ಬುಧವಾರ ಬಹುತೇಕರು ವಿಸರ್ಜಿಸಲಿದ್ದಾರೆ. ಸುಮಾರು 32 ಗಣೇಶ ಮೂರ್ತಿಗಳನ್ನು ಬುಧವಾರ ಸಂಜೆ ವಿಸರ್ಜಿಸುವರೆಂದು ಪೊಲೀಸರು ತಿಳಿಸಿದ್ದಾರೆ.
- Advertisement -
- Advertisement -
- Advertisement -
- Advertisement -