ಜಿಲ್ಲೆಯಲ್ಲಿ ಸಾವಿರಾರು ಸರ್ಕಾರಿ ನೌಕರರ ಹುದ್ದೆಗಳು ಖಾಲಿಯಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ನೌಕರರ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಸಿ.ರೆಡ್ಡಪ್ಪ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವೂ ಕೂಡ ಏಳನೇ ವೇತನ ಆಯೋಗ ಅನುಷ್ಟಾನಗೊಳಿಸಬೇಕೆಂದು ಒತ್ತಡ ಹೇರಲಾಗುತ್ತಿದ್ದು, ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ತಮ್ಮ ಕ್ರಿಯಾಶಿಲತೆಯನ್ನು ಪ್ರದರ್ಶಿಸಲು ಹಾಗೂ ಒತ್ತಡ ನಿವಾರಣೆಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ಸಾಹ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವ ಮೂಲಕ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ 2000 ಮಂದಿ ಸರ್ಕಾರಿ ನೌಕರರಿದ್ದು, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕೆಲವೇ ಮಂದಿ ಭಾಗವಹಿಸಿರುವುದು ದುರದೃಷ್ಟಕರ. ಕ್ರೀಡಾಕೂಟಕ್ಕೆ ಹಾಜರಾದವರಿಗೆ ಮಾತ್ರ ಹಾಜರಾತಿ ಪತ್ರವನ್ನು ನೀಡಬೇಕು. ಈ ಕಾರ್ಯಕ್ರಮದ ನೆಪದಲ್ಲಿ ರಜೆ ಹಾಕುವುದು ತಪ್ಪು ಎಂದರು.
ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಹಾಗೂ ನಿವೃತ್ತ ಶಿಕ್ಷಕ ವಿ.ಮುನಿರಾಜು ಮತ್ತು ರಾಷ್ಟ್ರೀಯ ಮಟ್ಟಕ್ಕೆ 400 ಮೀಟರ್ ಹರ್ಡಲ್ಸ್ಗೆ ಆಯ್ಕೆಯಾದ ಅನಂತರಾಜು ಅವರನ್ನು ಸನ್ಮಾನಿಸಲಾಯಿತು.
ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಿ.ವಿಜಯಕುಮಾರ್, ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಕೆ.ಎನ್.ಸುಬ್ಬಾರೆಡ್ಡಿ, ಅಕ್ಕಲರೆಡ್ಡಿ, ಆರ್.ಕೇಶವರೆಡ್ಡಿ, ಸಿ.ಎಂ.ಮುನಿರಾಜು, ಗ್ರೇಡ್ 2 ತಹಶಿಲ್ದಾರ್ ವಾಸುದೇವಮೂರ್ತಿ, ಶಿರಸ್ತೆದಾರ್ ನರೇಂದ್ರಬಾಬು, ಶ್ರೀರಾಮಯ್ಯ, ಗೌಸ್ಪೀರ್, ಬೈರಾರೆಡ್ಡಿ, ಮುನಿರಾಜು, ಬಿ.ಆರ್.ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -