ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ೬ ರಿಂದ ೮ ರ ವೃಂದಕ್ಕೆ ಪದನಾಮಕರಿಸುವಂತೆ ಒತ್ತಾಯಿಸಿ ಹಾಗೂ ೨೦೧೭ ರ ಸಿ ಮತ್ತು ಆರ್ ನಿಯಮವನ್ನು ತಿದ್ದುಪಡಿಗೆ ಆಗ್ರಹಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಶನಿವಾರ ಸಾಂಕೇತಿಕ ಧರಣಿಯನ್ನು ನಡೆಸಿ ನಂತರ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಅವರಿಗೆ ಸಲ್ಲಿಸಿದರು.
ರಾಜ್ಯದಲ್ಲಿ ೮೨ ಸಾವಿರಕ್ಕಿಂತ ಅಧಿಕ ಮಂದಿ ಪದವಿಧರರಾಗಿರುವ ಪ್ರಾಥಮಿಕ ಶಾಲೆಗಳ ಶಿಕ್ಷಕರಿದ್ದು, ಅವರು ಕಳೆದ ೧೪ ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಅವರನ್ನು ಮುಂಬಡ್ತಿಗೆ ಪರಿಗಣಿಸದೇ ೬ ರಿಂದ ೮ ನೇ ತರಗತಿಗೆ ಹೊಸದಾಗಿ ಎರಡು ಬಾರಿ ನೇಮಕ ಮಾಡಿ ಈಗ ಮತ್ತೆ ಮೂರನೇ ಬಾರಿಗೆ ನೇಮಕಾತಿ ನಡೆಯುತ್ತಿದೆ. ಈ ಬಗ್ಗೆ ಇಲಾಖೆಯ ಮುಖ್ಯಸ್ಥರು ಹಾಗೂ ಮಾನ್ಯ ಸಚಿವರನ್ನು ಕಂಡು ಮನವರಿಕೆ ಮಾಡಿದ್ದೇವೆ. ಫೆಬ್ರುವರಿ ೫ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ೨೫ ಸಾವಿರ ಮಂದಿ ಶಿಕ್ಷಕರು ಉಪವಾಸ ಸತ್ಯಾಗ್ರಹ ಮಾಡಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದೇವೆ. ಆದರೂ ಈವರೆಗೂ ನಮಗೆ ನ್ಯಾಯ ದೊರೆತಿಲ್ಲ. ಹಾಗಾಗಿ ಈ ದಿನ ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಮ್ಮನ್ನೆಲ್ಲಾ ಪದವೀಧರ ಶಿಕ್ಷರೆಂದು ಪರಿಗಣಿಸಬೇಕು. ಇಲ್ಲವಾದಲ್ಲಿ ನಾವು ನಮ್ಮ ಹೊಸ ವೃಂದ ನಿಯಮದಂತೆ ೧ ರಿಂದ ೫ ನೇ ತರಗತಿಯನ್ನು ಮಾತ್ರ ಭೋದಿಸುತ್ತೇವೆ. ೬ ರಿಂದ ೮ ನೇ ತರಗತಿಗಳ ಭೋದನೆಯನ್ನು ಬಹಿಷ್ಕರಿಸುತ್ತೇವೆ ಎಂದರು.
ಮನವಿಯನ್ನು ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಶಿಕ್ಷಕರ ಬೇಡಿಕೆ ನ್ಯಾಯಯುತವಾಗಿದೆ. ಇಲಾಖೆಗೆ ಹಾಗೂ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಮುಜಾಫಿರ್, ಉಪಾಧ್ಯಕ್ಷೆ ಕೆ.ಸುಮಾ, ಕಾರ್ಯದರ್ಶಿ ಬಿ.ಸಿ.ಶಿವಪ್ಪ, ಕೋಶಾಧ್ಯಕ್ಷ ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಮುನಿಯಪ್ಪ, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್.ಗಜೇಂದ್ರ, ನಾರಾಯಣಸ್ವಾಮಿ, ಸುರೇಶ್ ಹಾಜರಿದ್ದರು.
- Advertisement -
- Advertisement -
- Advertisement -







