ನಗರದಲ್ಲಿ ಸುಸಜ್ಜಿತವಾದ ಗ್ರಂಥಾಲಯವಿರಲಿ ಎಂಬ ಉದ್ದೇಶದಿಂದ ಈಗಿರುವ ಗ್ರಂಥಾಲಯದ ಕಟ್ಟಡದ ಸ್ಥಳವನ್ನು ಗ್ರಂಥಾಲಯ ಇಲಾಖೆಗೆ ನೀಡಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಸದಸ್ಯರೂ ಒಪ್ಪಿಗೆ ನೀಡಿದ್ದಾರೆ. ಹಳೆಯ ಕಟ್ಟಡದ ಸ್ಥಳದಲ್ಲಿ ಅತ್ಯುತ್ತಮ ಗ್ರಂಥಾಲಯ ಕಟ್ಟಡವು ನಿರ್ಮಾಣವಾಗಲಿ ಎಂದು ನಗರಸಭೆ ಆಯುಕ್ತ ಚಲಪತಿ ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಂಗಳವಾರ ನವರಾತ್ರಿಯ ಸರಸ್ವತಿ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಂಥಾಲಯವು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಓದುಗರನ್ನು ಸೆಳೆಯಬೇಕು. ಪುಸ್ತಕ ಓದುವವರ ಸಂಖ್ಯೆ ಹೆಚ್ಚಬೇಕು. ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಹುಟ್ಟುಹಾಕಬೇಕು. ನಗರಸಭೆಯಿಂದಲೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡುತ್ತೇವೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಸರಸ್ವತಿಯನ್ನು ವಿದ್ಯಾದೇವತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ, ಬದಲಿಗೆ ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ, ಸಂಸ್ಕೃತಿ, ಕಲೆ ಎಲ್ಲವೂ ಒಳಗೊಂಡಿದೆ. ಉತ್ತಮ ಮಾನವನಾಗಲು ಹಣವಿಲ್ಲದೇ ಹೋದರೂ ಈ ಗುಣಗಳು ಅಗತ್ಯವಾಗಿ ಬೇಕು. ಗ್ರಂಥಾಲಯದಲ್ಲಿ ಸರಸ್ವತಿ ಪೂಜೆಯನ್ನು ನಡೆಸುತ್ತಿರುವುದು ಸಮಂಜಸವಾಗಿದೆ. ಸರಸ್ವತಿಯ ಆರಾಧನೆಯೆಂದರೆ ವಿದ್ಯೆ, ಜ್ಞಾನ ಸಂಪಾದಿಸುವುದು. ಇದರಿಂದ ಲಕ್ಷ್ಮಿ ಒಲಿಯುವಳು ಎಂದು ಹೇಳಿದರು.
ಗ್ರಂಥಪಾಲಕಿ ರಾಮಲೀಲಾ, ಸಹಾಯಕಿ ಭಾಂದವ್ಯ, ಓದುಗರಾದ ವೃಷಭೇಂದ್ರಪ್ಪ, ವೇದಶ್ರೀ, ಲಕ್ಷ್ಮೀಕಾಂತ್ ಹಾಜರಿದ್ದರು.