ಹದಿನಾಲ್ಕು ತಿಂಗಳ ವೇತನ ನೀಡುವಂತೆ ಪೌರಕಾರ್ಮಿಕರ ಮನವಿ

0
138

ಕಳೆದ ಹದಿನಾಲ್ಕು ತಿಂಗಳುಗಳಿಂದ ನಮಗೆ ವೇತನ ನೀಡಿಲ್ಲ. ನಮಗೆ ವೇತನವನ್ನು ಕೊಡಿಸಿ ಎಂದು ಪೌರಕಾರ್ಮಿಕರು ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಮಂಗಳವಾರ ಮನವಿಯನ್ನು ಸಲ್ಲಿಸಿದರು.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆಗಿದ್ದು, ಎಲ್ಲರೂ ಸುರಕ್ಷಿತವಾಗಿ ಮನೆಯೊಳಗಿದ್ದರೆ, ಪೌರಕಾರ್ಮಿಕರಾದ ನಾವು ನಮ್ಮ ಪ್ರಾಣವನ್ನು ಪಣಕ್ಕಿಟ್ಟು, ನಿರಂತರವಾಗಿ ನಗರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಹೊರಗುತ್ತಿಗೆ ಪೌರಕಾರ್ಮಿಕರಾದ 19 ಜನರಿಗೆ ನಗರಸಭೆಯಿಂದ 14 ತಿಂಗಳಿನಿಂದ ವೇತನ ನೀಡಿಲ್ಲ. ನಾವುಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಕುಟುಂಬಗಳನ್ನು ಪೋಷಿಸಲು ಕಷ್ಟಪಡುತ್ತಿದ್ದೇವೆ. ಇನ್ನು ಶಾಲೆಗಳು ಪ್ರಾರಂಭವಾದ ನಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಶುಲ್ಕ ಪಾವತಿಸಲು ನಮ್ಮ ಬಳಿ ಹಣವಿಲ್ಲ. ಇದರಿಂದಾಗಿ ನಾವು ಮಾನಸಿಕವಾಗಿ ನೊಂದು ದಿಕ್ಕು ತೋಚದಂತಾಗಿದೆ. ಆದ್ದರಿಂದ ತಾವು ದಯವಿಟ್ಟು ಪೌರಕಾರ್ಮಿಕರ ಬಗ್ಗೆ ಕಾಳಜಿ ವಹಿಸಿ ನಮ್ಮ ವೇತನವನ್ನು ಕೊಡಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ತಹಶೀಲ್ದಾರ್ ಕೆ.ಅರುಂಧತಿ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಪೌರಕಾರ್ಮಿಕರ ವೇತನದ ಸಮಸ್ಯೆಯ ಬಗ್ಗೆ ಪೌರಾಯುಕ್ತರೊಂದಿಗೆ ಚರ್ಚಿಸಿದ್ದೇನೆ. ಅವರು ಇತ್ತೀಚೆಗಷ್ಟೇ ಅಧಿಕಾರವನ್ನು ವಹಿಸಿಕೊಂಡಿರುವುದರಿಂದ ಈ ಕಾರ್ಯವನ್ನು ಜರೂರಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಿಮ್ಮ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, ಮೇಲಧಿಕಾರಿಗಳನ್ನು ಭೇಟಿಯಾಗಲು ಹೋಗುತ್ತಿದ್ದು, ಎಷ್ಟು ತಿಂಗಳ ವೇತನ ಸಾಧ್ಯವಾಗುವುದೋ ಅಷ್ಟನ್ನು ಅತಿ ಶೀಘ್ರವಾಗಿ ನೀಡುತ್ತೇನೆ. ದಯವಿಟ್ಟು ಎಲ್ಲರೂ ನಿಮ್ಮ ಕೆಲಸವನ್ನು ಮುಂದುವರೆಸಿ. ನಿಮ್ಮ ವೇತನ ಕೊಡಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರಾದ ಮಂಜುನಾಥ, ರವಿಕುಮಾರ್, ನಾಗರಾಜ, ನಾರಾಯಣಪ್ಪ, ಭಾಸ್ಕರ್, ಪವನ, ಆಂಜಿನಪ್ಪ, ವೆಂಕಟೇಶ, ವೇಣುಗೋಪಾಲ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!