ಆಧುನಿಕತೆಯನ್ನು ಮೈಗೂಡಿಸಿಕೊಂಡ ಹೈನುಗಾರಿಕೆ ಲಾಭದಾಯಕ
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಹತ್ತು ಸೀಮೆ ಹಸುಗಳನ್ನು ಸಾಕಿರುವ ಕೆ.ಆನಂದಮೂರ್ತಿ ಆಧುನಿಕತೆಯನ್ನು ಹೈನುಗಾರಿಕೆಗೆ ಅಳವಡಿಸಿಕೊಳ್ಳುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಆಶಾಭಾವನೆಯನ್ನು ಮತ್ತು ಉತ್ಸಾಹವನ್ನು ಮೂಡಿಸಿದ್ದಾರೆ.
ನೂತನವಾಗಿ ಪರಿಚಯಿಸಲ್ಪಟ್ಟ ರಬ್ಬರ್ ಮ್ಯಾಟುಗಳನ್ನು ತಮ್ಮ ಹಸುಕಟ್ಟುವ ಕೊಟ್ಟಿಗೆಯಲ್ಲಿ ಹಾಸಿಕೊಳ್ಳುವ ಮೂಲಕ ಕೊಟ್ಟಿಗೆಯಲ್ಲಿ ಜಾರಿಕೆಯಿಂದ ಹಸುಗಳಿಗೆ ಮತ್ತು ನಿರ್ವಹಣೆ ಮಾಡುವವರಿಗೆ ಆಗಬಹುದಾದ ತೊಂದರೆಗಳನ್ನು ನಿವಾರಿಸಿಕೊಂಡಿದ್ದಾರೆ. ಇದರಿಂದಾಗಿ ಕೊಟ್ಟಿಗೆಯನ್ನು ಶುಚಿಗೊಳಿಸಲು ಅನುಕೂಲವಾಗಿದೆ. ಸಮತಟ್ಟಾದ ನೆಲಹಾಸಿಲ್ಲದೆ ಗಂಜಲ ಸಗಣಿ ನಿಂತು ಹಸುಗಳಿಗೆ ಕೆಚ್ಚಲು ಬಾವು ಆಗುತ್ತಿದ್ದುದೂ ಈಗ ನಿಂತಿದೆ.
ಪ್ರತಿದಿನ ಸರಾಸರಿ 140 ಲೀಟರ್ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಾರುವ ಇವರ ಹೈನುಗಾರಿಕೆಯ ಪ್ರಗತಿಯನ್ನು ಗುರುತಿಸಿ ಕೋಚಿಮುಲ್ ರಾಷ್ಟ್ರೀಯ ಕೃಷಿ ವಿಕಾಸದ ಯೋಜನೆಯ ಮೂಲಕ ಸುಮಾರು 68 ಸಾವಿರ ರೂಗಳ ಬೆಲೆಯ ಹಾಲು ಕರೆಯುವ ಯಂತ್ರ ಮತ್ತು ಹಸು ತೊಳೆಯುವ ಯಂತ್ರವನ್ನು ಉಚಿತವಾಗಿ ನೀಡಿದೆ.
‘ರಬ್ಬರ್ ಮ್ಯಾಟುಗಳು ಪರಿಚಯಿಸಿದಾಗ ಇದರ ಉಪಯೋಗ ಯಾವ ರೀತಿ ಆಗಬಹುದೆಂಬ ಅನುಮಾನದಿಂದ ನಮ್ಮ ಗ್ರಾಮದ ಕೆ. ಆನಂದಮೂರ್ತಿ ಅವರಿಗೆ ನೀಡಿದೆವು. ಅವರು ತಮ್ಮ ಕೊಟ್ಟಿಗೆಯಲ್ಲಿ ಹಾಸಿದ್ದನ್ನು ನೋಡಿ ಅದು ನಿಜಕ್ಕೂ ಉಪಯುಕ್ತವೆಂದು ತಿಳಿಸಿದ ನಂತರ ಹಾಲು ಉತ್ಪಾದಕರ ಸಹಕಾರ ಸಂಘದಿಂದ 120 ರಬ್ಬರ್ ಮ್ಯಾಟುಗಳನ್ನು ತರಿಸಿ ಹಸು ಸಾಕುವವರಿಗೆ ವಿತರಿಸುತ್ತಿದ್ದೇವೆ. 50 ಕೆ.ಜಿ ತೂಗುವ ಈ ರಬ್ಬರ್ ಮ್ಯಾಟ್ 6 ಅಡಿ ಉದ್ದ ಮತ್ತು 4 ಅಡಿ ಅಗಲವಿದ್ದು, ಒಂದರೊಂದಿಗೆ ಮತ್ತೊಂದು ಹೆಣೆದುಕೊಳ್ಳುವ ರೀತಿಯಲ್ಲಿ ರೂಪಿಸಲಾಗಿದೆ. ಎರಡು ವರ್ಷಗಳ ವ್ಯಾರಂಟಿ ಕೂಡ ಇದಕ್ಕಿದೆ. ತಲಾ 2,700 ರೂಗಳ ಈ ಮ್ಯಾಟ್ಗೆ ಸರ್ಕಾರದಿಂದ 1,200 ರೂಗಳ ಸಹಾಯಧನ ಕೂಡ ಸಿಗುತ್ತದೆ’ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಗೋವಿಂದರಾಜು ತಿಳಿಸಿದರು.
ಹೆಚ್ಚು ಹಾಲು ಉತ್ಪಾದಕರೆಂದು ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿರುವ ಕೆ. ಆನಂದಮೂರ್ತಿ ಹದಿನೈದು ದಿನಕ್ಕೊಮ್ಮೆ ಕಡಿಮೆಯೆಂದರೆ 30 ಸಾವಿರ ರೂಗಳಷ್ಟು ಸಹಕಾರ ಸಂಘದಿಂದ ಹಾಲಿನ ಹಣ ಪಡೆಯುತ್ತಾರೆ. ಅದರಲ್ಲಿ ಅರ್ಧದಷ್ಟು ಮೇವು, ಬೂಸಾ ಖರ್ಚಾಗುತ್ತದೆ. ಸರ್ಕಾರದಿಂದ ಸಿಗುವ ಸಹಾಯ ಧನ, ಕೊಟ್ಟಿಗೆ ಗೊಬ್ಬರದಿಂದ ಸಿಗುವ ಹಣ ಇವರ ಶ್ರಮಕ್ಕೆ ಪ್ರತಿಫಲವಾಗಿ ಸಿಗುತ್ತಿದೆ.
‘ಹತ್ತು ಹಸುಗಳನ್ನು ನಿರ್ವಹಣೆ ಮಾಡಲು ಸಾಕಷ್ಟು ಸಮಯ ಹಾಗೂ ಶ್ರಮದಾಯಕ ಕೆಲಸ. ಆದರೆ ಈಗೀಗ ಲಭಿಸುತ್ತಿರುವ ವಿವಿಧ ಸಾಧನ ಸಲಕರಣೆಗಳನ್ನು ಬಳಸಿಕೊಳ್ಳುವ ಮೂಲಕ ಶ್ರಮ ಕಡಿಮೆಯಾಗಿ ಉತ್ಪಾದನೆ ಹೆಚ್ಚಳ ಕಂಡಿದೆ. ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ತರಿಸಿದ ರಬ್ಬರ್ ಮ್ಯಾಟ್ಗಳು ಅನುಕೂಲಕರವಾಗಿದೆ. ಹಸುಗಳಿಗೆ ಆಗುತ್ತಿದ್ದ ಗಾಯ, ಕೆಚ್ಚಲುಬಾವಿನ ಸಮಸ್ಯೆ ನಿವಾರಣೆಯಾಗಿದೆ. ಹಾಲು ಕರೆಯುವ ಯಂತ್ರದಿಂದ ಸಾಕಷ್ಟು ಸಮಯ ಉಳಿತಾಯವಾಗಿದೆ. ಹಸು ತೊಳೆಯುವ ಯಂತ್ರದಿಂದ ನೀರು ಮತ್ತು ಸಮಯವೂ ಉಳಿತಾಯವಾಗಿದೆ. ಆಧುನಿಕತೆಯ ಜ್ಞಾನವು ಹೈನುಗಾರಿಕೆಗೆ ಇನ್ನಷ್ಟು ಸಹಾಯ ಮಾಡಿದಲ್ಲಿ ಉಪಯುಕ್ತವಾಗುತ್ತದೆ’ ಎನ್ನುತ್ತಾರೆ ಕೆ. ಆನಂದಮೂರ್ತಿ.
- Advertisement -
- Advertisement -
- Advertisement -
- Advertisement -