ಮಳೆ ಕೈಕೊಟ್ಟು ಈಗಾಗಲೇ ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆಯುವಂತೆ ಹಿಪ್ಪುನೇರಳೆ ಸೊಪ್ಪಿಗೆ ಕೆಂಪು ತಲೆಯ ಕಂಬಳಿ ಹುಳುಗಳ ಕಾಟ ಪ್ರಾರಂಭವಾಗಿದ್ದು, ಹಲವರು ತಮ್ಮ ಬೆಳೆಯನ್ನೇ ಕಳೆದುಕೊಂಡಿದ್ದಾರೆ.
ತಾಲ್ಲೂಕಿನಾದ್ಯಂತ ಮಳೆಯಿಲ್ಲದೆ, ಅಂತರ್ಜಲ ಕುಸಿತದಿಂದ ರೈತರು ಕಂಗಲಾಗಿದ್ದು, ಇರುವ ಅತ್ಯಲ್ಪ ನೀರಿನಲ್ಲಿಯೇ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಿದ್ದಾರೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೂ ಬಾಧಿಸುತ್ತಿದ್ದ ಕಂಬಳಿ ಹುಳುಗಳ ಕಾಟ ಈ ಬಾರಿ ನಾಲ್ಕು ಪಟ್ಟು ಹೆಚ್ಚಾಗಿದೆ. ಹಲವಾರು ಹೆಕ್ಟೇರ್ಗಳಷ್ಟು ಹಿಪ್ಪುನೇರಳೆ ಸೊಪ್ಪಿನ ತೋಟ ಕಂಬಳಿ ಹುಳುಗಳಿಗೆ ಆಹಾರವಾಗಿದೆ. ಕೆಲವರ ತೋಟಗಳಲ್ಲಿ ಶೇ.90 ರಷ್ಟು ಸೊಪ್ಪುಗಳನ್ನು ಹುಳುಗಳು ಕಬಳಿಸಿವೆ.
ಒಂದೆಡೆ ಕುಡಿ ತಿನ್ನುವ ಹುಳುಗಳು ಕಾಡುತ್ತಿದ್ದರೆ, ಮತ್ತೊಂದೆಡೆ ಬಂತೆ ಹುಳುಗಳೆಂದೇ ಕರೆಯುವ ಕಂಬಳಿಹುಳುಗಳು ಸೊಪ್ಪನ್ನು ತಿನ್ನುತ್ತಿವೆ. ಕಂಬಳಿಹುಳುಗಳ ಆವಾಸ ಎಲೆಗಳ ಅಡಿಯಲ್ಲಿ. ಕೀಟವು ಸುಮಾರು 300 ರಿಂದ 400 ಮೊಟ್ಟೆಗಳನ್ನಿಟ್ಟು ಹೋಗುತ್ತದೆ. ಅವುಗಳಿಂದ ಹೊರ ಬರುವ ಹುಳುಗಳು ಬಕಾಸುರನಂತೆ ಎಲೆಯ ಸಾರವನ್ನೆಲ್ಲಾ ತಿನ್ನುತ್ತಾ ಅತಿ ಶೀಘ್ರವಾಗಿ ಬೆಳೆಯುತ್ತವೆ. ಎಲೆಗಳನ್ನು ತಿನ್ನುತ್ತಾ ರೆಂಬೆಯಿಂದ ರೆಂಬೆಗೆ ತೋಟದಿಂದ ತೋಟಕ್ಕೆ ಹರಡುತ್ತವೆ.
ರೈತರು ಹುಳುಗಳು ಸಣ್ಣದಿದ್ದಾಗ ಎಲೆ ಸಮೇತವಾಗಿ ಕತ್ತರಿಸಿ ಬಕೆಟ್ನಲ್ಲಿ ಸಂಗ್ರಹಿಸಿ ನಂತರ ಒಂದೆಡೆ ಗುಂಡಿ ತೋಡಿ ಮುಚ್ಚುತ್ತಿದ್ದಾರೆ. ಆದರೆ ಹುಳುಗಳು ದೊಡ್ಡದಾಗಿರುವ ಕಡೆ ಅವುಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನ ಬಹುತೇಕ ಎಲ್ಲಾ ಕಡೆಯೂ ಹಿಪ್ಪುನೇರಳೆ ಸೊಪ್ಪಿಗೆ ಕಂಬಳಿ ಹುಳುಗಳ ಹಾವಳಿ ಇದೆ. ಇದರಿಂದ ಸೊಪ್ಪಿನ ಇಳುವರಿ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಆ ಸೊಪ್ಪು ತಿನ್ನುವ ರೇಷ್ಮೆ ಹುಳುಗಳು ಹಲವು ರೋಗಗಳು ಬಂದು ಅದರಲ್ಲೂ ರೈತರಿಗೆ ನಷ್ಟ ಸಂಭವಿಸುತ್ತದೆ.
‘ಎಲೆ ತಳಭಾಗದಲ್ಲಿ ಹುಳುಗಳಿರುವುದರಿಂದ ಅಲ್ಲಿಗೆ ಶೇ.2 ರಷ್ಟು ನೂವಾನ್ ಮಿಶ್ರಿತ ಔಷಧಿಯನ್ನು ಸಿಂಪಡಿಸಬೇಕು. ಹಾಗೂ ಕುಡಿಯಲ್ಲಿನ ಹುಳುಗಳಿಗೆ ಕುಡಿಗೂ ಸಿಂಪಡಣೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಪ್ರಾಥಮಿಕ ಹಂತದಲ್ಲೇ ಹುಳುಗಳನ್ನು ಹತೋಟಿಗೆ ತರಲು ಔಷಧಿ ಸಿಂಪಡಿಸದಿದ್ದಲ್ಲಿ ಅವುಗಳನ್ನು ಹತೋಟಿಗೆ ತರಲು ಸಾಧ್ಯವಿಲ್ಲ. ಈಗಾಗಲೇ ರೈತರು ಅಪಾರ ನಷ್ಟದಲ್ಲಿರುವುದರಿಂದ ಹಾಗೂ ಇದು ಜಿಲ್ಲೆಯ ರೇಷ್ಮೆ ಬೆಳೆಗಾರರ ಸಮಸ್ಯೆಯ ಕಾರಣ ತಕ್ಷಣ ಜಿಲ್ಲಾ ಮಟ್ಟದ ಆಯುಕ್ತರ ಮತ್ತು ಜಂಟಿ ನಿರ್ದೇಶಕರ ಸಭೆ ನಡೆಸಬೇಕು. ರೇಷ್ಮೆ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಔಷಧಿಯನ್ನು ವಿತರಿಸಬೇಕು’ ಎಂದು ವಿಶ್ವೇಶ್ವರಯ್ಯ ರೈತ ಕೂಟದ ಸದಸ್ಯರು ಒತ್ತಾಯಿಸಿದ್ದಾರೆ.
- Advertisement -
- Advertisement -
- Advertisement -
- Advertisement -