ಮಹಿಳೆಯರ ಶಕ್ತಿ ಕೇಂದ್ರವಾದ ಅಡುಗೆ ಮನೆಗೆ ‘ಅಗ್ನಿ ಸಖಿ’ಯ ಆಗಮನವಾಗಿದೆ. ಹೆಂಗೆಳೆಯರ ಸಖ್ಯ ಬೆಳೆಸಲು ಆಗಮಿಸಿರುವುದು ಹೊಸ ರೀತಿಯ ಒಲೆ, ಅದುವೇ ಭಾರತೀಯ ವಿಜ್ಞಾನ ಸಂಸ್ಥೆಯ ಅನ್ವೇಷಣೆಯ ನೂತನ ‘ಅಗ್ನಿ ಸಖಿ’ ಒಲೆ.
ಜೈವಿಕ ಅನಿಲ, ಉರುವಲು ಸೌದೆ ಬಳಸುತ್ತಿದ್ದ ತಾಲ್ಲೂಕಿನ ಸುಮಾರು 130 ಅಡುಗೆ ಮನೆಗಳಲ್ಲಿ ಈಗ ಅಗ್ನಿ ಸಖಿಯಿಂದ ಅಡುಗೆ ತಯಾರಾಗುತ್ತಿದೆ. ಎಲ್.ಪಿ.ಜಿ ಯಂತೆ ಅಡುಗೆ ಮಾಡಬಹುದಾದ, ಇಂಧನ ಉಳಿತಾಯ ಮತ್ತು ಸುರಕ್ಷೆಯುಳ್ಳ ಈ ಒಲೆ ತನ್ನೆಡೆಗೆ ಎಲ್ಲರನ್ನೂ ಆಕರ್ಷಿಸುತ್ತಿದೆ.
ಸ್ಥಳೀಯವಾಗಿ ಸಿಗುವ ಕೃಷಿ ತ್ಯಾಜ್ಯ, ಅತ್ಯಂತ ಕಡಿಮೆ ಉರುವಲು ಬಳಸಿಕೊಂಡು ಅಡುಗೆ ಮಾಡಬಹುದಾಗಿದೆ. ಹಾಗಾಗಿ ಇಂಧನ ವೆಚ್ಚ ಶೂನ್ಯ. ಹೊಗೆ ಇಲ್ಲದೆ ಅಡುಗೆ ಮಾಡಬಹುದು. ಜಾಗದ ಉಳಿತಾಯ, ಸುರಕ್ಷಿತ, ಸುಲಭ ನಿರ್ವಹಣೆ ಸಾಧ್ಯವಿದೆ. ಒಲೆಯನ್ನು ಗುಣಮಟ್ಟದ ಇನ್ಸುಲೇಟ್ ವಸ್ತುಗಳಿಂದ ತಯಾರಿಸಿರುವುದರಿಂದ ಅಡುಗೆ ಮಾಡುವವರಿಗೆ ಶಾಖದ ಅನುಭವವಾಗದು.
ಈ ಒಲೆಯನ್ನು ಮೊಟ್ಟ ಮೊದಲು ಅಭಿವೃದ್ಧಿಪಡಿಸಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಎಚ್.ಎಸ್.ಮುಕುಂದ. ಆ ಒಲೆಯು ಪರಿಷ್ಕರಿಸಲ್ಪಟ್ಟು ಈಗ ಮೂರನೆಯ ಆವೃತ್ತಿಯ ಒಲೆಯು ಮನೆಮನೆಗಳಲ್ಲಿ ಪರಿಚಿತವಾಗುತ್ತಿದೆ.
ಇಷ್ಟೆಲ್ಲ ಅನುಕೂಲಕರವಾದ ‘ಅಗ್ನಿ ಸಖಿ’ ಯನ್ನು ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ಪರಿಚಯಿಸುತ್ತಿರುವವರು ಬೆಂಗಳೂರಿನ ಟೆಕ್ನಾಲಜಿ ಇನ್ಫರ್ಮಾಟಿಕ್ ಡಿಸೈನ್ ಎಂಡಿವರ್(ಟಿಐಡಿಇ) ಸಂಸ್ಥೆ. ಬೆಂಗಳೂರಿನ ಸಸ್ಟೈನ್ ಟೆಕ್ ತಯಾರಿಸುವ ಈ ಒಲೆಯನ್ನು ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪೆನಿಯ ಜತೆಗೂಡಿ ತಾಲ್ಲೂಕಿನ 30ಕ್ಕೂ ಹೆಚ್ಚು ಹಳ್ಳಿಗಳ 130 ಅಡುಗೆಮನೆಗಳಲ್ಲಿ ಅಳವಡಿಸಿದ್ದಾರೆ.
‘ನೆರೆಹೊರೆಯಲ್ಲಿ ಸುಲಭವಾಗಿ ಸಿಗುವ ಒಣಗಿದ ಕಟ್ಟಿಗೆ, ಜೈವಿಕ ಇಂಧನದಲ್ಲಿ ಒಲೆಯನ್ನು ಉರಿಸಬಹುದಾಗಿದೆ. ಹೊಗೆಯಿಲ್ಲದೆ ಹೊತ್ತಿಸಿ, ಉರಿಸಬಹುದು, ಮಸಿಯೂ ಆಗದು. ಶಾಖ ಹಾಗೂ ಗಾಳಿ ನಿಯಂತ್ರಣ ಸಾಧ್ಯವಿರುವುದರಿಂದ ಬಹಳ ಬೇಗ ಅಡುಗೆ ಮಾಡಬಹುದು’ ಎನ್ನುತ್ತಾರೆ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜನಾರ್ಧನಮೂರ್ತಿ.
‘ತಾಲ್ಲೂಕಿನ ಅಬ್ಲೂಡು, ಮಳಮಾಚನಹಳ್ಳಿ, ಎಸ್.ದೇವಗಾನಹಳ್ಳಿ, ಸಾದಹಳ್ಳಿ, ಯಣ್ಣಂಗೂರು, ಬೆಳ್ಳೂಟಿ, ಹಿತ್ತಲಹಳ್ಳಿ, ಆನೂರು, ಕೆ.ಮುತ್ತುಗದಹಳ್ಳಿ, ಕುತ್ತಾಂಡಹಳ್ಳಿ, ಬೋದಗೂರು, ತಲದುಮ್ಮನಹಳ್ಳಿ, ವರದನಾಯಕನಹಳ್ಳಿ, ಮೇಲೂರು, ಕುತ್ತಾಂಡಹಳ್ಳಿ ಮುಂತಾದ ಹಳ್ಳಿಗಳಲ್ಲಿ ಈ ಒಲೆಯ ಅನುಕೂಲಗಳನ್ನು ವಿವರಿಸಿ ಪರಿಚಯಿಸಿದ್ದೇವೆ. 4,500 ರೂ ಬೆಲೆಯ ಈ ಒಲೆಯನ್ನು ರಯಾಯಿತಿ ದರಕ್ಕೆ ನೀಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.
ಟೈಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸ್ವಾತಿ ಭೋಗ್ಲೆ, ‘ಗ್ರಾಮೀಣ ಭಾಗಗಳಲ್ಲಿ ಅದರಲ್ಲೂ ರೇಷ್ಮೆಯ ಅವಲಂಬಿತ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ತ್ಯಾಜ್ಯ ಉರುವಲು ಸಿಗುವುದರಿಂದ ಎಲ್.ಪಿ.ಜಿ ಗಿಂತಲೂ ಈ ಒಲೆ ಹಣ ಉಳಿಸುತ್ತದೆ. ನೀರನ್ನು ಕಾಯಿಸಲು, ಅಡುಗೆ ಮಾಡಲು ಅಷ್ಟೇ ಅಲ್ಲದೆ, ಸಾಗಾಣಿಕೆ ಸುಲಭವಾದ್ದರಿಂದ ಹುಳು ಸಾಕಾಣಿಕಾ ಮನೆಯನ್ನು ಶಾಖವಾಗಿರಿಸಲು ಸಹ ಈ ಒಲೆ ಬಳಸಬಹುದು’ ಎನ್ನುತ್ತಾರೆ.
ಟೈಡ್ ಸಂಸ್ಥೆಯ ಹಿರಿಯ ಯೋಜನಾಧಿಕಾರಿ ಆಶಿಕ್ ಅಹಮದ್ ಅವರ ಪ್ರಕಾರ ಇನ್ನೂ ಈ ಒಲೆಯನ್ನು ಮನೆಮನೆಗೆ ತಲುಪಿಸುವ ಕೆಲಸ ಬಹಳಷ್ಟಿದೆ. ಒಟ್ಟಾರೆ ಆರೋಗ್ಯಪೂರ್ಣ, ಹಣ ಉಳಿತಾಯದ, ಪರಿಸರ ಸಂರಕ್ಷಿತ ಹಾಗೂ ಸುರಕ್ಷಿತ ಅಡುಗೆ ಒಲೆ ನಮ್ಮ ಹೆಣ್ಣುಮಕ್ಕಳಿಗೆ ಸಿಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಸಾಗಿದೆ.
‘ಅಗ್ನಿ ಸಖಿ ಒಲೆಯನ್ನು ಮೂರು ತಿಂಗಳಿನಿಂದ ಬಳಸುತ್ತಿದ್ದೇನೆ. ಮನೆಯಲ್ಲಿ ಏಳು ಮಂದಿಗೆ ಅಡುಗೆ ಮಾಡಬೇಕು. ಈಗಂತೂ ನನ್ನ ಕೆಲಸ ಬಹಳಷ್ಟು ಸುಲಭವಾಗಿದೆ. ಅನ್ನ, ಸಾರು, ಮುದ್ದೆ, ಕಾಫಿ, ಟೀ, ಬೇಗ ಮಾಡಬಹುದು. ತೋಟದ ಹಾಗೂ ಇತರ ಕೆಲಸಗಳಿಗೆ ಹೆಚ್ಚು ಸಮಯ ಸಿಗುತ್ತಿದೆ. ಹಿಂದೆ ಪಾತ್ರಗಳೆಲ್ಲ ಮಸಿಯಿಂದ ಕಪ್ಪಾಗಿ ತೊಳೆಯುವುದೇ ಒಂದು ಕೆಲಸವಾಗಿತ್ತು. ಈಗ ಈ ಒಲೆಯಿಂದ ಹೊಗೆಯೂ ಇಲ್ಲ ಮಸಿಯೂ ಇಲ್ಲ’ ಎಂದು ತಮ್ಮ ಅನುಭವವನ್ನು ಅಬ್ಲೂಡಿನ ಶಿವಮ್ಮ ವಿವರಿಸಿದರು.
- Advertisement -
- Advertisement -
- Advertisement -