‘ಶಿಡ್ಲಘಟ್ಟದ ದೇವರು ಹಿಂದುಮುಂದು’ ಎಂಬ ಗಾದೆ ಮಾತಿಗೆ ಕಾರಣವಾದ, ‘ಊರದೇವರು’ ಎಂದೇ ಪ್ರಸಿದ್ಧವಾದ ನಗರದ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಮುಜುರಾಯಿ ಇಲಾಖೆಗೆ ಸೇರಿರುವ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿಲಾಯಿತು. ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥವನ್ನು ಎಳೆಯಲು ಕಾತುರದಿಂದ ಕಾಯುತ್ತಿದ್ದ ಭಕ್ತರು ಚಾಲನೆ ಸಿಗುತ್ತಿದ್ದಂತೆ ಉದ್ದವಾದ ಹಗ್ಗವನ್ನು ಹಿಡಿದು ರಥವನ್ನು ಎಳೆದು ಸಂಭ್ರಮಿಸಿದರು. ತಮಟೆವಾದನ, ಮಂಗಳವಾದ್ಯಗಳ ನಡುವೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಮಹಿಳೆಯರು ಕಾಯಿ ಒಡೆದು ಪೂಜಿಸಿ ಆರತಿ ಬೆಳಗಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಸೌತೇಕಾಯಿ ಹೆಸರುಬೇಳೆಯನ್ನು ಭಕ್ತರಿಗೆ ಹಂಚಿದರು. ದೇವಾಲಯದಲ್ಲಿ ಪ್ರಸಾದ ವಿನಿಯೋಗಿಸಲಾಯಿತು. ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ರಸ್ತೆಯ ಬದಿಗಳಲ್ಲಿ ನಿಂತಿದ್ದ ಜನರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಬಾಳೆಹಣ್ಣು ಮತ್ತು ದವನವನ್ನು ರಥಕ್ಕೆ ಎಸೆದು ಹರಕೆ ಸಲ್ಲಿಸಿದರು.
ರಥೋತ್ಸವದ ಅಂಗವಾಗಿ ಈಧರೆ ಕಲಾತಂಡದಿಂದ ಡೊಳ್ಳುಕುಣಿತವನ್ನುಆಯೋಜಿಸಲಾಗಿತ್ತು.
‘ಈ ಹಿಂದೆ ಅಶೋಕ ರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ಬ್ರಹ್ಮ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ತಿರುಗಿಸಿ ರಥವನ್ನು ಹಿಂಬದಿಯಿಂದ ಎಳೆದು ತರಲಾಗುತ್ತಿತ್ತು’ ಹೀಗಾಗಿ ‘ಶಿಡ್ಲಘಟ್ಟ ದೇವರು ಹಿಂದುಮುಂದು’ ಎಂಬ ಗಾದೆಮಾತು ಚಾಲ್ತಿಯಲ್ಲಿತ್ತು ಎಂದು ಭಕ್ತರೊಬ್ಬರು ನೆನಪಿಸಿಕೊಂಡರು.
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಭಾನುವಾರದಿಂದ ಪ್ರಾರಂಭವಾದ ಪೂಜಾ ಕಾರ್ಯಕ್ರಮಗಳು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಜಾತಿಯವರೂ ವಿವಿಧ ಕೈಂಕರ್ಯಗಳಲ್ಲಿ ಭಾಗಿಯಾಗುವುದು ವಿಶೇಷವಾಗಿದೆ.
ಋತ್ವಿಜರಾದ ಕೆ.ವಿ.ಸುಬ್ರಮಣ್ಯಶಾಸ್ತ್ರಿ, ಎಸ್.ಸತ್ಯನಾರಾಯಣರಾವ್, ಎನ್.ಆರ್.ಶ್ರೀನಾಥ್, ದೇವಾಲಯ ಸಮಿತಿ ಸಂಚಾಲಕ ರೂಪಸಿ ರಮೇಶ್, ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಬಿ.ಪಿ.ರಾಘವೇಂದ್ರ, ಕಾರ್ಯದರ್ಶಿ ಎಲ್.ಮಧುಸೂದನ್, ಪುರಸಭಾ ಸದಸ್ಯರಾದ ಬಾಲಕೃಷ್ಣ, ವೆಂಕಟಸ್ವಾಮಿ, ಚಿಕ್ಕಮುನಿಯಪ್ಪ, ಮತ್ತಿತರರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -







