ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ 22 ನೇ ತಿಂಗಳ ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಚ್.ಗವಿಸಿದ್ದಯ್ಯ ಮಾತನಾಡಿದರು.
ಎಲ್ಲಾ ಭಾಷೆಗಿಂತ ತಾಯಿ ಭಾಷೆ ದೊಡ್ಡದು. ಅದರಲ್ಲಿನ ತಾಯ್ತನದಿಂದ ನಾವು ಭಾವನೆ, ಸ್ಪಂದನೆ, ನೋವು ನಲಿವುಗಳನ್ನು ಶಕ್ತ ರೀತಿಯಲ್ಲಿ ಅಭಿವ್ಯಕ್ತಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಸೂರ್ಯ ಚಂದ್ರರಿರುವವರೆಗೂ ಸಾಹಿತ್ಯ ಶಾಶ್ವತ. ಚಿರಂತನವಾದ ಈ ಸಾಹಿತ್ಯ ಸೇವೆ ಶ್ರೇಷ್ಠವಾದುದು. ಸಾಹಿತ್ಯದ ಅಭಿರುಚಿಯಿದ್ದರೆ ಮಾನವೀಯತೆ, ಸೌಹಾರ್ಧತೆ, ಎಲ್ಲರನ್ನೂ ಗೌರವಿಸುವ ಮನೋಭಾವ, ವಿನಯಶೀಲತೆ ಮೂಡುತ್ತದೆ. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಎಲ್ಲೋ ಇರುವ ದೇವರನ್ನು ಪೂಕಿಸುವ ಮುನ್ನ ಪ್ರತ್ಯಕ್ಷ ದೇವರುಗಳಾದ ತಂದೆ ತಾಯಿಗಳನ್ನು ಪ್ರೀತ್ಯಾದರದಿಂದ ಕಾಣಬೇಕು. ಈಗೀಗ ಅವಿಭಕ್ತ ಕುಟುಂಬಗಳು ಹೋಗಿ ವಿಭಕ್ತ ಕುಟುಂಬಗಳಾಗುತ್ತಿವೆ. ಸಂಬಂಧಗಳನ್ನು ಕಡಿದುಕೊಳ್ಳಬಾರದು ಎಂದು ಹೇಳಿದರು.
ನಾಡು ನುಡಿಗೆ ಸಲ್ಲಿಸುವ ಸೇವೆ ನಿಜವಾದ ಸೇವೆ. ನನ್ನ ಊರಿನ ಋಣ ತೀರಿಸಲು, ಆವತಿಯ ಬಗ್ಗೆ ಇತಿಹಾಸದ ಪುಸ್ತಕ ಬರೆದೆ. ಅನೇಕ ಶಿಲಾಶಾಸನಗಳು, ಶಾಸನಗಳ ಬಗ್ಗೆ ಮಾಹಿತಿ ಪಡೆದು, ಹಲವು ವಿಷಯಗಳನ್ನು ಸಂಗ್ರಹಿಸಿ ರಣಭೈರೇಗೌಡರ ಬಗ್ಗೆ ಪುಸ್ತಕ ಬರೆದೆ ಎಂದು ತಮ್ಮ ಸಾಹಿತ್ಯ ಕೃಷಿಯ ಬಗ್ಗೆ ವಿವರಿಸಿ, “ಕನ್ನಡಾಂಬೆ, ಸಜ್ಜನರೇ ಹೀಗೆ, ಪೆನ್ನು, ವಾಲ್ಮೀಕಿ ಮುಂತಾದ ಸ್ವರಚಿತ ಕವನಗಳನ್ನು ಕಾರ್ಯಕ್ರಮದಲ್ಲಿ ವಾಚಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ದೊಡ್ಡಬಳ್ಳಾಪುರದ ಆರ್.ಎಲ್. ಜಾಲಪ್ಪ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ.ಗವಿಸಿದ್ದಯ್ಯ, ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಊರಿನವರು. ಪ್ರಸ್ತುತ ಬುಳ್ಳಹಳ್ಳಿ , ದೇವನಹಳ್ಳಿ ತಾಲ್ಲೂಕಿನಲ್ಲಿ ವಾಸವಿದ್ದಾರೆ. ಅನೇಕ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಇವರು ಬರೆದ ಕಥೆ, ಕವ, ಚುಟುಕು ಮತ್ತು ಲೇಖನ ಮೊದಲಾದುವುಗಳು ಪ್ರಕಟವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಕಟನೆಗಳಲ್ಲಿ ಇವರು ಬರೆದ ಕಥೆ ಮತ್ತು ಕವನಗಳು ಪ್ರಕಟವಾಗಿದೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ವತಿಯಿಂದ ಇವರಿಗೆ “ಸಾಹಿತ್ಯ ವಿಶಾರದ” ಎನ್ನುವ ಬಿರುದು ನೀಡಿ ಗೌರವಿಸಿದೆ. 2003 ರಲ್ಲಿ ವೆಂಕಟಗಿರಿಕೋಟೆಯಲ್ಲಿ ನಡೆದ ದೇವನಹಳ್ಳಿ ತಾಲ್ಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ಪ್ರೊ.ಗವಿಸಿದ್ದಯ್ಯ ಅವರ ಪರಿಚಯ ಮಾಡಿದರು.
ಸಾಹಿತಿ ಚಂದ್ರಶೇಖರ ಹಡಪದ್ ಮಾತನಾಡಿ, ಸಾಹಿತ್ಯ ಅನ್ನುವುದು ಸಮಕಾಲೀನ ಇತಿಹಾಸವನ್ನು ಸಹ ತಿಳಿಸುತ್ತದೆ. ಸಾಹಿತ್ಯ ಮೂಲಕ ತಿಳಿದುಬರುವ ಇತಿಹಾಸ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುತ್ತದೆ ಎಂದರು.
ಸಾಹಿತಿಗಳಾದ ಪ್ರೊ.ಗವಿಸಿದ್ದಯ್ಯ ಮತ್ತು ಚಂದ್ರಶೇಖರ ಹಡಪದ್ ತಾವು ಬರೆದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ನಿವೃತ್ತ ಶಿಕ್ಷಕ ಸುಂದರನ್, ಶಿಕ್ಷಕ ದೇವರಾಜ್, ಲೋಕೇಶ್, ಮಂಗಳ, ಹುಜಗೂರು ಕೆಂಪೇಗೌಡ, ಬೆಳ್ಳೂಟಿ ರಮೇಶ್, ಚಲನಚಿತ್ರ ನಟ ಸಿ.ಎನ್.ಮುನಿರಾಜು, ಸತೀಶ್, ಗ್ರಂಥಪಾಲಕಿ ಶಂಶಾದ್ ಬೇಗಂ, ಸಹಾಯಕಿ ಭಾಂದವ್ಯ, ವೈಶಾಕ್, ಲಕ್ಷ್ಮೀಕಾಂತ್ , ಮಕ್ಸೂದ್, ಸುದರ್ಶನ್, ಶ್ರೀನಾಥ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







