31.1 C
Sidlaghatta
Friday, April 19, 2024

ಒಂದು ಶತಮಾನದ ಅಂತರ – ಸಂಚಾರ ಪ್ರಾರಂಭಿಸಿತು ಬೆಂಗಳೂರು ರೈಲು

- Advertisement -
- Advertisement -

‘ಕೋಲಾರ – ಬೆಂಗಳೂರು ಸಿಟಿ’ ಎಂಬ ಫಲಕವನ್ನು ಹೊಂದಿದ ರೈಲು ಶುಕ್ರವಾರ ನಗರದ ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆಯೇ ‘ಹೋ..’ ಎಂಬ ಉದ್ಘಾರ, ಚಪ್ಪಾಳೆಯ ಸ್ವಾಗತವು ದೊರಕಿತು. ಊರಿಗೆ ಬಂದ ನೂತನ ಅತಿಥಿಯಂತೆ, ಕನಸಿನಂತೆ, ಹೊಸ ಆಶಾವಾದದಂತೆ, ಪ್ರಗತಿಯ ದ್ಯೋತಕದಂತೆ ರೈಲಿಗಾಗಿ ಕಾಯುತ್ತಿದ್ದ ಜನರು ಸಂಭ್ರಮಿಸಿದರು.
ಆಗಮಿಸಿದ ರೈಲಿಗೆ ಕರ್ಪೂರವನ್ನು ಅಂಟಿಸಿ ತೆಂಗಿನ ಕಾಯಿಯನ್ನು ಒಡೆದು ಪೂಜೆಯನ್ನು ಸಲ್ಲಿಸಿದರು. ಬೆಳಿಗ್ಗೆ 6.30 ರಿಂದಲೇ ಕಾಯುತ್ತಿದ್ದ ಜನರು 8.20 ಕ್ಕೆ ರೈಲು ಆಗಮಿಸಿದರೂ ಅದೇ ಉತ್ಸಾಹದಲ್ಲಿದ್ದರು. ಕೋಲಾರದಿಂದ ಆಗಮಿಸಿದ ರೈಲಿಗೆ ವಿವಿಧ ನಿಲ್ದಾಣಗಳಲ್ಲಿ ಜನರು ಪೂಜೆ ಸಲ್ಲಿಸಿದ ಕಾರಣ ತಡವಾದರೂ, ಇನ್ನು ಮುಂದೆ ಪ್ರತಿ ದಿನ ಬೆಂಗಳೂರಿಗೆ ರೈಲಿನಲ್ಲಿ ಹೋಗಬಹುದು ಎಂಬ ಖುಷಿಯು ಜನರ ಉತ್ಸಾಹ ಮತ್ತು ಸಂತೋಷವನ್ನು ದ್ವಿಗುಣಗೊಳಿಸಿತ್ತು.
ಶಿಡ್ಲಘಟ್ಟಕ್ಕೆ ನ್ಯಾರೋಗೇಜ್ ರೈಲು ನಿಂತ ಮೇಲೆ, ಸುಮಾರು ಹದಿನೈದು ವರ್ಷಗಳ ನಂತರ 2013 ರಲ್ಲಿ ರೈಲಿನ ಆಗಮನವಾದಾಗ ಜನರು ಸಂತೋಷಿಸಿದಂತೆ ಶುಕ್ರವಾರವೂ ಸಾರ್ವಜನಿಕರು ಸಂತಸವನ್ನು ಅನುಭವಿಸಿದರು. ಹಿಂದೆ ಈ ಭಾಗದಲ್ಲಿದ್ದ ನ್ಯಾರೋಗೇಜ್ ರೈಲು ತಾಲ್ಲೂಕಿನಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಈರುಳ್ಳಿ, ಆಲೂಗಡ್ಡೆ, ಹಸಿಮೆಣಸಿನಕಾಯಿ ಮುಂತಾದ ವಾಣಿಜ್ಯ ಬೆಳೆಗಳ ಸಾಕಾಣಿಕೆಗೆ ಅನುಕೂಲವಾಗಿತ್ತು. ಈಗ ರೈತರು ಗತ ವೈಭವ ಮರುಕಳಿಸಿದಂತೆ ಭಾವಿಸಿದ್ದಾರೆ.
‘ಕೋಲಾರ – ಬೆಂಗಳೂರು ಸಿಟಿ’ ರೈಲಿನಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಬೆಳಗಿನ 7.20 ರ ಸಮಯಕ್ಕೆ ಶಿಡ್ಲಘಟ್ಟಕ್ಕೆ ಬಂದು 9.45 ರ ಒಳಗೆ ಬೆಂಗಳೂರು ತಲುಪುವುದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗಿದೆ. ಶಿಡ್ಲಘಟ್ಟದಿಂದ ಪ್ರತಿದಿನವೂ ಹಲವಾರು ಮಂದಿ ನೌಕರಿಗಾಗಿ, ವಿದ್ಯಾಭ್ಯಾಸಕ್ಕಾಗಿ ಯಲಹಂಕ ಮತ್ತು ಬೆಂಗಳೂರಿಗೆ ಹೋಗುತ್ತಾರೆ. ಅವರಿಗೆಲ್ಲಾ ಇದು ವರದಾನವಾಗಲಿದೆ. ಹಲವಾರು ಮಂದಿ ವರ್ತಕರು ಯಶವಂತಪುರದ ಯಾರ್ಡ್ಗೆ ಹೋಗುತ್ತಾರೆ. ಅವರು ರೈಲಿನಲ್ಲಿ ನೇರವಾಗಿ ಹೋಗಿ ಯಶವಂತಪುರದಲ್ಲೇ ಇಳಿಯಬಹುದು. ನಂತರ ಅಲ್ಲಿ ಖರೀದಿ ಮಾಡಿ ರೈಲಿನಲ್ಲೇ ವಾಪಸಾಗಬಹುದು. ಬಸ್ನಲ್ಲಿ ಹೋಗಿ ಬರುವ ಹಣದ ಅರ್ಧದಷ್ಟು ಉಳಿತಾಯವಾಗಲಿದೆ. ಸಂಜೆ ಬೆಂಗಳೂರು ರೈಲು ನಿಲ್ದಾಣದಿಂದ 6.10ಕ್ಕೆ ಹೊರಟು ಶಿಡ್ಲಘಟ್ಟಕ್ಕೆ 7.30 ಕ್ಕೆ ತಲುಪುವುದರಿಂದ ಪ್ರತಿದಿನ ಪ್ರಯಾಣಿಸುವವರಿಗೂ ಸಹಕಾರಿಯಾಗಲಿದೆ’ ಎಂದು ಮಂಜುನಾಥ ಅರಸ್ ತಿಳಿಸಿದರು.
ನ್ಯಾರೋಗೇಜ್ ನಿಂದ ಬ್ರಾಡ್ಗೇಜ್ವರೆಗೆ ನೂರು ವರ್ಷದ ಇತಿಹಾಸ
21nov3ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸಂದರ್ಭದಲ್ಲಿ ದಕ್ಷಿಣ ರೈಲ್ವೆ ವಿಭಾಗದ ಏಕೈಕ 104 ಕಿ.ಮೀ ನ್ಯಾರೋಗೇಜ್ ಮಾರ್ಗವು ಪೂರ್ಣಗೊಂಡಿತ್ತು. ಜನರಿಂದ ಸಾಲ ಪತ್ರ ಮುಖೇನ ಸಂಗ್ರಹಿಸಿದ ಹಣದಲ್ಲಿ 1911 ರಲ್ಲಿ ಪ್ರಾರಂಭವಾದ ಬೆಂಗಳೂರು – ಬೌರಿಂಗ್ಪೇಟೆ(ಬಂಗಾರಪೇಟೆ) ನಡುವಿನ ರೈಲು ಮಾರ್ಗ 1915ರಲ್ಲಿ ಮುಗಿಸಲಾಯಿತು. ಬೆಂಗಳೂರಿನಿಂದ ಯಶವಂತಪುರ, ಯಲಹಂಕ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ ಸೇರಿದಂತೆ 13 ನಿಲ್ದಾಣಗಳಿದ್ದವಂತೆ. 1935ರಲ್ಲಿ ಬೆಂಗಳೂರಿನಿಂದ ಕೋಲಾರಕ್ಕಿದ್ದ ರೈಲು ಪ್ರಯಾಣ ದರ ಮೂರು ರೂಪಾಯಿ ಆರಾಣೆ(ಮೇಲ್ದರ್ಜೆಗೆ). 1970 ರ ದಶಕದಲ್ಲಿ ನ್ಯಾರೋಗೇಜ್ ಮಾರ್ಗವು ಆರ್ಥಿಕವಾಗಿ ಲಾಭಕರವಾಗಿಲ್ಲವೆಂದು ರದ್ದು ಮಾಡಿದರೂ, ಸಾರ್ವಜನಿಕರ ಒತ್ತಡಕ್ಕೆ ಮಣಿದು 1979 ರಲ್ಲಿ ಯಲಹಂಕ, ಚಿಕ್ಕಬಳ್ಳಾಪುರ, ಬಂಗಾರಪೇಟೆ ನಡುವೆ ರೈಲುಸಂಚಾರವನ್ನು ಪುನರಾರಂಭಿಸಿತು. 90 ರ ದಶಕದಲ್ಲಿ ಬ್ರಾಡ್ಗೇಜ್ ಪರಿವರ್ತನೆಗಾಗಿ ಸ್ಥಗಿತಗೊಂಡ ನಂತರ 2013 ರ ಮೇ ತಿಂಗಳಲ್ಲಿ ಪುನರಾಂಭವಾಗಿತ್ತು. ಚಿಕ್ಕಬಳ್ಳಾಪುರ ಮತ್ತು ಕೋಲಾರದ ನಡುವೆ ಮಾತ್ರ ಸಂಚಾರವಿತ್ತು. ಈಗ ಒಂದು ಶತಮಾನದ ಬಳಿಕ 104 ಕಿ.ಮೀ ‘ಕೋಲಾರ – ಬೆಂಗಳೂರು ಸಿಟಿ’ ರೈಲು ಸಂಚಾರ ಪ್ರಾರಂಭವಾಗಿದೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!