ಬೆಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಸಾಂಸ್ಕೃತಿಕವಾಗಿ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರನ್ನು ಯಾವುದೇ ಒಂದು ಸಮಾದಾಯಕ್ಕೆ ಸೀಮಿತಗೊಳಿಸದೇ ಎಲ್ಲರೂ ಗೌರವಿಸುವಂತಹ ಕೆಲಸವಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್. ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಣ್ಣಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಯುವಕರ ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಮತ್ತು ಜಯಂತ್ಯುತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರದಲ್ಲಿ ವಿವಿಧ ಸಮುದಾಯದವರಿಗೆ ಅವರದೇ ಆದಂತಹ ಪೇಟೆಗಳನ್ನು ನಿರ್ಮಿಸಿ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಮಾಡಿಕೊಡುವ ಮೂಲಕ ನಾಡಪ್ರಭು ಕೆಂಪೇಗೌಡರು ಸಮಾಜದ ಎಲ್ಲಾ ವರ್ಗಗಳ ಪ್ರೀತಿ ಗಳಿಸಿದ್ದರು. ಮುಂದಿನ ಪೀಳಿಗೆಗಾಗಿ ನೂರಾರು ಕೆರೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ ಅವರು ಬರೀ ಒಕ್ಕಲಿಗರಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಅವರು ಎಲ್ಲಾ ಸಮುದಾಯಗಳಿಗೆ ಸೇರಿದ ಐತಿಹಾಸಿಕ ಮಾಹಾಪುರುಷ.
ಸರ್ಕಾರದಿಂದ ಎಲ್ಲಾ ಸಮುದಾಯದರಿಗಾಗಿ ಒಂದೊಂದು ಜಯಂತಿ ಆಚರಿಸಲಾಗುತ್ತಿದೆಯಾದರೂ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸದಿರುವುದು ಒಕ್ಕಲಿಗ ಸಮುದಾಯಕ್ಕೆ ಒಂದು ನೋವಿನ ಸಂಗತಿ. ಹಾಗಾಗಿ ಒಕ್ಕಲಿಗರ ಸಂಘ, ಯುವಸೇನೆಯಂತಹ ಸಂಘಟನೆಗಳಿಂದ ಸರ್ಕಾರಕ್ಕೆ ಕೆಂಪೇಗೌಡರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು ಎಂದು ಒತ್ತಾಯಿಸಿ ಪತ್ರ ಚಳುವಳಿ ಆರಂಭಿಸುವ ಮೂಲಕ ಒತ್ತಡ ಹೇರಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ. ಉಳಿದಂತೆ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಬೆರಸದೇ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಎಲ್. ಸತೀಶ್ ಮಾತನಾಡಿ, ಯಾವುದೇ ಒಂದು ಜಾತಿಯಿಂದ ಅಥವ ಒಂದು ಕಸುಬಿನಿಂದ ಈ ಸಮಾಜ ಉದ್ದಾರವಾಗದು. ಬದಲಿಗೆ ಎಲ್ಲಾ ಸಮುದಾಯಗಳ ಎಲ್ಲಾ ಕಸುಬಿಗಳಿಗೆ ಮನ್ನಣೆ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ವಿಶ್ವಖ್ಯಾತಿ ಪಡೆದಿದೆ. ಅವರ ಕಾಲದಲ್ಲಿ ಅವರು ನಿರ್ಮಿಸಿದ ಕೆರೆ, ಕುಂಟೆ, ಕಲ್ಯಾಣಿಗಳಿಂದ ಬರೀ ಒಕ್ಕಲಿಗರು ಮಾತ್ರ ನೀರು ಬಳಸಲಿಲ್ಲ. ಎಲ್ಲಾ ವರ್ಗದ ಜನರು ಸಾಮರಸ್ಯವಾಗಿ ಜೀವಿಸುವ ಮೂಲಕ ಉತ್ತಮ ಸಮಾಜ ನಿರ್ಮಣಕ್ಕೆ ಅಡಿಪಾಯ ಹಾಕಿಕೊಟ್ಟಂತಹ ಇಂತಹ ಮಹಾನುಭಾವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಸ್ಮರಿಸುವ ಮೂಲಕ ಜಯಂತಿ ಆಚರಣೆ ಮಾಡಬೇಕು ಎಂದರು.
ಕೆಂಪೇಗೌಡರ ಜಯಂತಿಗೆ ಸರ್ಕಾರಿ ರಜೆ ಬೇಡ, ಸರ್ಕಾರಿ ಗೌರವ ಮಾತ್ರ ಬೇಕು. ಒಕ್ಕಲಿಗರಾದ ನಾವುಗಳು ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ಕೆ.ಎನ್. ಸುಬ್ಬಾರೆಡ್ಡಿ, ದೊಣ್ಣಹಳ್ಳಿ ಯುವಕರ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ. ವೆಂಕಟೇಶ್ಮೂರ್ತಿ, ಒಕ್ಕಲಿಗ ಯುವಸೇನೆ ತಾಲ್ಲೂಕು ಅಧ್ಯಕ್ಷ ಜೆ.ಎಸ್. ವೆಂಕಟಸ್ವಾಮಿ, ನಗರಾಧ್ಯಕ್ಷ ಪುರುಷೋತ್ತಮ್, ರೈತ ಸಂಘದ ರವಿಪ್ರಕಾಶ್, ತಾದೂರು ಮಂಜುನಾಥ್, ದೊಣ್ಣಹಳ್ಳಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೆ.ಲಕ್ಷ್ಮಿಪತಿ, ಉಪಾಧ್ಯಕ್ಷ ಡಿ.ವಿ. ಲೋಕೇಶ್ ಹಾಗೂ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -