ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೊರೊನಾ ಹಾಟ್ಸ್ಪಾಟ್ ಎಂದು ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಗಳನ್ನು ತೆರೆಯುವುದು ನಿಜಕ್ಕೂ ಅಪಾಯಕಾರಿ. ರೇಷ್ಮೆ ಗೂಡು ಮಾರುಕಟ್ಟೆಗಳು ಎಪಿಎಂಸಿ ಮಾರುಕಟ್ಟೆಗಳಂತಲ್ಲ. ರೀಲರ್ ಗಳು ಹಾಗೂ ರೈತರು ಮುಖಾಮುಖಿ ಆಗುವುದರಿಂದ ರೋಗವು ಪ್ರತಿ ಹಳ್ಳಿಗಳಿಗೂ ವ್ಯಾಪಿಸುವ ಆತಂಕ ಎದುರಾಗಿದೆ ಎಂದು ಜಿಲ್ಲಾ ರೇಷ್ಮೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಯಲುವಹಳ್ಳಿಸೊಣ್ಣೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಅಧಿಕಾರಿಗಳು ರೈತರು ಮತ್ತು ರೀಲರುಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ರೀಲರುಗಳ ಪೋನ್ ಸಂಖ್ಯೆಗಳನ್ನು ರೈತರಿಗೆ ನೀಡುವುದರ ಮೂಲಕ ವಹಿವಾಟು ನಡೆಸಲಾಗುತ್ತಿದೆ. ಈ ಬಿಕ್ಕಟ್ಟಿನಲ್ಲಿ ಸಹಜವಾಗಿ ಕೆಜಿ ಗೂಡಿಗೆ ಐವತ್ತು ರೂ ಕಡಿಮೆ ಯಾಗಿದೆ. ಈ ಸಮಸ್ಯೆಯನ್ನು ವ್ಯವಹಾರಿಕವಾಗಿ ನೋಡದೆ ಆರೋಗ್ಯ ದೃಷ್ಟಿಯಿಂದ ಮಾರುಕಟ್ಟೆಗಳನ್ನು ಬಂದ್ ಮಾಡುವುದೇ ಸೂಕ್ತವಾಗಿ ಇರುತ್ತದೆ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಸರ್ಕಾರ ಭಾವನಾತ್ಮಕವಾಗಿ ಯೋಚನೆ ಮಾಡಿ ರೇಷ್ಮೆ ಗೂಡು ಮಾರುಕಟ್ಟೆಗಳನ್ನು ಪುನಃ ಪ್ರಾರಂಭಿಸಲು ನಿರ್ಣಯ ಕೈಗೊಂಡಿರುವುದು ರೈತರ ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ ನಿರ್ಧಾರವಾಗಿರುತ್ತದೆ. ಕೊರೊನಾ ಹರಡಿ ಅನಾಹುತ ಆದ ಪಶ್ಚಾತ್ತಾಪ ಪಡುವುದರ ಬದಲು ಮಾರುಕಟ್ಟೆಯನ್ನು ಮುಚ್ಚಿಸಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
- Advertisement -
- Advertisement -
- Advertisement -
- Advertisement -