ಕೋವಿಡ್ 19 ಕುರಿತಂತೆ ಜನಸಾಮಾನ್ಯರಿಗೆ ಹೆಚ್ಚೆಚ್ಚು ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದಲ್ಲಿ ಗುರುವಾರ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆ ಹೊರತಂದಿರುವ ಕೋವಿಡ್ 19 ಕುರಿತಂತೆ ಮಾಹಿತಿಯುಳ್ಳ ಭಿತ್ತಿಪತ್ರಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಕೋವಿಡ್ 19 ಸೋಂಕು ಬರದ ಹಾಗೆ ನಾವು ವೈದ್ಯರು, ಆರೋಗ್ಯ ಇಲಾಖೆಯವರು ತಿಳಿಸಿರುವ ಮಾರ್ಗಸೂಚಿ ಹಾಗೂ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯಕ್ರಮ ಸಂಯೋಜಕ ವೆಂಕಟೇಶ್ ಮಾತನಾಡಿ, “ಭಿತ್ತಿಪತ್ರಗಳ ಮೂಲಕ ಸಮುದಾಯದಲ್ಲಿ, ಮಕ್ಕಳಲ್ಲಿ, ಹಿರಿಯರಲ್ಲಿ ಕೋವಿಡ್ 19 ಅಂದರೇನು, ಅದರ ಲಕ್ಷಣಗಳೇನು, ಹೇಗೆ ಹರಡುತ್ತದೆ, ಅದನ್ನು ತಡೆಗಟ್ಟುವುದು ಹೇಗೆ ಮುಂತಾದ ವಿಷಯಗಳನ್ನು ತಿಳಿಸುತ್ತಾ ಜನಜಾಗೃತಿಯನ್ನು ಮೂಡಿಸುವುದು ನಮ್ಮ ಉದ್ದೇಶವಾಗಿದೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಬಳಿ, ಜನ ಜಂಗುಳಿ ಸೇರುವಲ್ಲಿ ಈ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಅರಿವು ಮೂಡಿಸುತ್ತೇವೆ. ನಮ್ಮ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಉದ್ದೇಶ ಎಲ್ಲಾ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಹೆಣ್ಣುಮಕ್ಕಳು 18 ವರ್ಷದೊಳಗೆ ವಿವಾಹ ಆಗಬಾರದು, ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಪೌರಾಯುಕ್ತ ತ್ಯಾಗರಾಜ್, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಸತೀಶ್, ಸಿಬ್ಬಂದಿ ಕಾಂತರಾಜ್ ಹಾಜರಿದ್ದರು.







