ನಗರಗಳಿಗೆ ವಲಸೆ ನಿಯಂತ್ರಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ವೃತ್ತಿಯಾಧಾರಿತ ಕೌಶಲ್ಯ ತರಬೇತಿಗಳ ಅಗತ್ಯವಿದೆ ಎಂದು ಕೌಶಲ್ಯ ಅಭಿವೃದ್ಧಿ ತರಬೇತಿ ನಿಗಮದ ಅಧ್ಯಕ್ಷೆ ಪುಷ್ಪಲಕ್ಷ್ಮಣಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ನೂತನವಾಗಿ ಲೋಕಿ ಪೌಂಡೇಷನ್ ವತಿಯಿಂದ ಆರಂಭಗೊಂಡಿರುವ ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೌಶಲ್ಯ ಭವನವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ನೀಡುವಂತಹ ತರಬೇತಿಗಳನ್ನು ಪಡೆದುಕೊಂಡು ಮಹಿಳೆಯರೂ ಕೂಡಾ ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು, ಈ ಕೇಂದ್ರದಲ್ಲಿ ತಜ್ಞರಿಂದ ಉಚಿತವಾಗಿ ಕಂಪ್ಯೂಟರ್, ಹಾರ್ಡ್ವೇರ್, ಮತ್ತು ಸಾಫ್ಟ್ವೇರ್ ತರಬೇತಿ, ಅಗರಬತ್ತಿ ತಯಾರಿಕೆ, ಸ್ಪೋಕನ್ ಇಂಗ್ಲೀಷ್, ಮೋಟರ್ ವೈಂಡಿಂಗ್, ಪ್ಲಂಬಿಂಗ್, ರೇಷ್ಮೆ ಗೂಡಿನಿಂದ ಹಾರ ಮುಂತಾದ ಕಲಾಕೃತಿಗಳನ್ನು ತಯಾರಿಸುವ ತರಬೇತಿ ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಗಳು ಅಥವಾ ಸಂಘ ಸಂಸ್ಥೆಗಳು ಬಯಸಿದ್ದಲ್ಲಿ ಅಗರಬತ್ತಿ ತಯಾರಿಸುವ ಅತ್ಯಾಧುನಿಕ ಯಂತ್ರವನ್ನು ಕಡಿಮೆ ಬೆಲೆಗೆ ಕೊಡಿಸಲಾಗುವುದು. ಜೊತೆಯಲ್ಲಿ ಕಚ್ಚಾ ಸಾಮಗ್ರಿ ನೀಡುವುದು. ತಯಾರಾದ ಸಾಮಗ್ರಿಯನ್ನು ಕೊಳ್ಳುವ ಮೂಲಕ ಮಾರುಕಟ್ಟೆಯ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಡಲಾಗುತ್ತದೆ.
ನಿರುದ್ಯೋಗಿ ಯುವಕ ಮತ್ತುಯುವತಿಯರು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಇದಕ್ಕೆ ಪೂರಕವಾಗಿ ನಿಗಮದಿಂದ ಅವಶ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ವಿಜ್ಞಾನಿ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢಿಕರಣ ಮಾಡಿಕೊಂಡು ವಿವಿಧ ಬಗೆಯ ವಸ್ತುಗಳನ್ನು ತಯಾರು ಮಾಡುವುದನ್ನು ರೂಡಿಸಿಕೊಳ್ಳಬೇಕು, ಭಾರತ ದೇಶದಲ್ಲಿ ಸುಗಂಧದ್ರವ್ಯಗಳನ್ನು ಬಳಕೆ ಮಾಡಲು ಪ್ರತಿವರ್ಷ ೬೦ ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದ್ದು, ಇಂತಹ ಸುಗಂಧದ್ರವ್ಯಗಳನ್ನು ತಯಾರಿಕೆ ಮಾಡುವಂತಹ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕು ಎಂದರು.
ಲೋಕಿ ಪೌಂಡೇಷನ್ ಅಧ್ಯಕ್ಷ ಲೋಕೇಶ್ಗೌಡ, ಎಂ.ಸಿ.ಎ ಅಧ್ಯಕ್ಷ ಎಲ್.ಎನ್.ಮೂರ್ತಿ, ಜಂಟಿ ನಿರ್ದೇಶಕ ವೆಂಕಟೇಶ್, ಪ್ರಗತಿಪರ ಕುರಿಸಾಕಾಣಿಕೆದಾರರ ಸಂಘದ ನಿರ್ದೇಶಕ ರಾಮಣ್ಣ, ಸದಸ್ಯೆ ಸುಜಾತಮ್ಮ, ಡಾ.ಮುನಿನಾರಾಯಣರೆಡ್ಡಿ, ಅರಿಕೆರೆ ಮುನಿರಾಜು, ಮುನಿರತ್ನಮ್ಮ, ಕಾಚಹಳ್ಳಿ ರತ್ನಮ್ಮ, ಹರಿಪ್ರಸಾದ್, ವೆಂಕಟರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







