ಸಾರಿಗೆ ನಿಯಮ ಪಾಲನೆಗೆ ದುಬಾರಿ ದಂಡ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಯುವಕರು ತಮ್ಮ ಗೆಳೆಯನ ಗೃಹಪ್ರವೇಶಕ್ಕೆ ಉಡುಗೊರೆಯಾಗಿ ಹೆಲ್ಮೆಟ್ ನೀಡುವ ಮೂಲಕ ವಿಶಿಷ್ಟತೆಯನ್ನು ಮೆರೆದಿದ್ದಾರೆ.
ಅಪ್ಪೇಗೌಡನಹಳ್ಳಿಯ ರಂಜಿತ್ ಅವರ ಗೃಹಪ್ರವೇಶಕ್ಕೆ ಗೆಳೆಯರಾದ ನರಸಿಂಹಮೂರ್ತಿ, ಮಹೇಶ್, ನವೀನ್, ಜಗದೀಶ್, ಮನೋಜ್, ವೇಣು, ಮನೋಹರ್, ಆಕಾಶ್, ರವಿಕುಮಾರ್ ಜೊತೆಗೂಡಿ ಈಗಿನ ಅಗತ್ಯತೆಗೆ ಅನುಗುಣವಾಗಿ ಹೆಲ್ಮೆಟ್ ಉಡುಗೊರೆಯಾಗಿ ನೀಡಿದ್ದಾರೆ.
“ಮೊದಲಾದರೆ ನೂರು ರೂ ದಂಡವಿತ್ತು. ಆದರೆ ಈಗ ಹೆಲ್ಮೆಟ್ ಇಲ್ಲದಿದ್ದರೆ, ಒಂದು ಸಾವಿರ ರೂ ದಂಡ ವಿಧಿಸುತ್ತಿದ್ದಾರೆ. ನಮ್ಮ ಸ್ನೇಹಿತ ರಂಜಿತ್ ಬಳಿ ಬೈಕ್ ಇದೆ ಆದರೆ ಹೆಲ್ಮೆಟ್ ಇರಲಿಲ್ಲ. ಅದಕ್ಕೆ ನಾವು ಗೆಳೆಯರು ಒಗ್ಗೂಡಿ ಅವನಿಗೆ ಉಪಯುಕ್ತವಾದ ಹೆಲ್ಮೆಟ್ ಕೊಟ್ಟಿದ್ದೇವೆ. ಗೆಳೆಯನಿಗೆ ಸಾರಿಗೆ ನಿಯಮ ಪಾಲಿಸುವಂತೆ ತಿಳಿಸಿದ್ದೇವೆ. ವಾಹನ ಸವಾರರಿಗೆ ಹೆಲ್ಮೆಟ್ ಜೀವರಕ್ಷಕವಿದ್ದಂತೆ ಮತ್ತು ಕಾನೂನು ಪಾಲನೆಯೂ ಅವಶ್ಯಕ. ಅದಕ್ಕಾಗಿ ಸರ್ಕಾರ ದಂಡದ ಮೊತ್ತವನ್ನು ಹೆಚ್ಚಿಸಿದ್ದಾರೆ. ಆದರೆ ಈಗ ಹೆಲ್ಮೆಟ್ ದರ ಗಗನಕ್ಕೇರಿದೆ. ಅದಕ್ಕಾಗಿ ದಂಡ ವಿಧಿಸುವ ಸ್ಥಳದಲ್ಲೇ ದಂಡದ ಹಣದಲ್ಲಿಯೇ ಒಂದು ಹೆಲ್ಮೆಟ್ ಕೊಟ್ಟರೆ ಒಳ್ಳೆಯದು ಮತ್ತು ಗ್ರಾಮಾಂತರ ಬಡ ಜನರಿಗೆ ಈ ದುಬಾರಿ ದಂಡ ತೆರಲು ಕಷ್ಟವಾಗುವುದರಿಂದ ಸರ್ಕಾರ ದಂಡದ ಮೊತ್ತವನ್ನು ತಗ್ಗಿಸಿದರೆ ಒಳ್ಳೆಯದು” ಎಂದು ಅಪ್ಪೇಗೌಡನಹಳ್ಳಿ ನರಸಿಂಹಮೂರ್ತಿ ತಿಳಿಸಿದರು.
- Advertisement -
- Advertisement -
- Advertisement -







