ಕೋವಿಡ್ 19 ತಡೆಗಟ್ಟಲು ವಿಧಿಸಿರುವ ನಿರ್ಬಂಧಗಳನ್ನು ಪಾಲಿಸದೇ ಟೌನ್ ಎಸ್.ಎಫ್.ಸಿ.ಎಸ್ ಸಂಘದವರು ಕಾರ್ಯಕ್ರಮ ಆಯೋಜನೆ ಮಾಡಿರುವ ಬಗ್ಗೆ ತಹಶೀಲ್ದಾರ್ ಅವರು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಶಿಡ್ಲಘಟ್ಟದ ಡಾಲ್ಫಿನ್ ಕಾಲೇಜಿನ ಆವರಣದಲ್ಲಿ ಮೇ 27 ರಂದು ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘ(ಎಸ್.ಎಫ್.ಸಿ.ಎಸ್ )ದ ವತಿಯಿಂದ 42 ಸಂಘಗಳಿಗೆ 2 ಕೋಟಿ 25 ಲಕ್ಷ ಬಡ್ಡಿರಹಿತ ಸಾಲ ವಿತರಣೆ ಮಾಡಲಾಗಿತ್ತು. ಸುಮಾರು 500 ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮಕ್ಕೆ ಅನುಮತಿ ಪಡೆಯದಿರುವುದು, ಅಂತರ ಕಾಯ್ದುಕೊಳ್ಳದಿರುವುದು ಹಾಗೂ ಮಾಸ್ಕ್ ಧರಿಸದೇ ಕೋವಿಡ್ 19 ತಡೆಗಟ್ಟಲು ವಿಧಿಸಿರುವ ನಿರ್ಬಂಧಗಳನ್ನು ಪಾಲಿಸದಿರುವ ಬಗ್ಗೆ ಆಯೋಜಕರ ಮೇಲೆ 269,188 IPC ವಿಪತ್ತು ನಿರ್ವಹಣೆ ಕಾಯ್ದೆಯ ಅಡಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಡಿಸಿಸಿ ಬ್ಯಾಂಕಿನ ವತಿಯಿಂದ ರೈತರ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವ ಬಡ್ಡಿ ರಹಿತ ಸಾಲ ವಿತರಣಾ ಕಾರ್ಯಕ್ರಮ ಸಾದಲಿ, ವೈ.ಹುಣಸೇನಹಳ್ಳಿ, ಮಳ್ಳೂರು, ನಗರದ ಡಾಲ್ಫಿನ್ ವಿದ್ಯಾ ಸಂಸ್ಥೆ ಮತ್ತು ಮಳಮಾಚನಹಳ್ಳಿಯಲ್ಲಿ ಸೇರಿ ಇದುವರೆಗೂ ತಾಲ್ಲೂಕಿನಲ್ಲಿ ಐದು ಕಡೆ ನಡೆದಿದೆ. ಎಲ್ಲೆಡೆ ನೂರಾರು ಸಂಖ್ಯೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಕೇವಲ ಒಂದು ಕಾರ್ಯಕ್ರಮದ ಬಗ್ಗೆ ಮಾತ್ರ ದೂರು ನೀಡಿರುವ ತಾಲ್ಲೂಕು ಆಡಳಿತ ಉಳಿದ ಕಾರ್ಯಕ್ರಮಗಳ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂಬುದು ಕಾದು ನೋಡಬೇಕಿದೆ.
- Advertisement -
- Advertisement -
- Advertisement -
- Advertisement -