ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆಚ್ಚಾಗುತ್ತಿರುವ ಬಿಕ್ಷುಕರ ಸಂಖ್ಯೆ, ಅನಾಥರಾಗುತ್ತಿರುವ ವಯಸ್ಕರು ಹಾಗೂ ಸಮಾಜದಲ್ಲಿ ಹೆಚ್ಚಾಗುತ್ತಿರುವ ವೃದ್ಧಾಶ್ರಮಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಗಂಟೆ ಅವಧಿಯ ಸಿನಿಮಾ ಮಾಡಿದ್ದೇವೆ. ಜನರು ಚಲನಚಿತ್ರ ವೀಕ್ಷಣೆ ಮಾಡಿ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಲಿಖಿತ್ ಕುಮಾರ್ ತಿಳಿಸಿದರು.
“ತಾಯಿ ತಂದೆಯರು ತಮಗಾಗಿ ಗುಡಿಯನ್ನು ಕಟ್ಟುವಂತೆ ಮಕ್ಕಳನ್ನು ಕೋರುವುದಿಲ್ಲ. ಆದರೆ, ಬೇರೆ ಯಾರೋ ಕಟ್ಟಿರುವ ಗುಡಿಯಲ್ಲಿ ಭಿಕ್ಷೆ ಬೇಡುವಂತೆ ನಮ್ಮನ್ನು ಮಾಡಬೇಡಿ ಎಂದು ಕೋರಿಕೊಳ್ಳುತ್ತಾರೆ” – ಸಮಾಜದ ಈ ವಾಸ್ತವ ಸಂಗತಿಯೆಡೆಗೆ ಬೆಳಕು ಚೆಲ್ಲುವ, ತಂದೆ ತಾಯಿಯರ ಮೌಲ್ಯ, ಮಮತೆ, ಕಡಿಮೆಯಾತ್ತಿರುವ ಮಕ್ಕಳ ಪ್ರೀತಿಯನ್ನು ಆಧರಿಸಿ “ತ್ಯಾಗ” ಎಂಬ ಸಿನೆಮಾ ನಿರ್ಮಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದೇವೆ ಎಂದು ಅವರು ಹೇಳಿದರು.
ಮೈಸೂರು, ಮಂಡ್ಯ, ಹಾಸನ, ಕೆ.ಆರ್.ನಗರ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ. ಅನೇಕ ಮಂದಿ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಸುಮಾರು ೩ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇವೆ. ಈಗಾಗಲೇ ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಅದರಿಂದ ಬಂದ ಆದಾಯದಲ್ಲಿ ಸ್ವಲ್ಪ ಭಾಗವನ್ನು ವೃದ್ಧಾಶ್ರಮಗಳಿಗೆ ನೀಡಿದ್ದೇವೆ.
ತಾಲ್ಲೂಕಿನ ದಿಬ್ಬೂರಹಳ್ಳಿ ಮಾರುತಿ ಚಿತ್ರಮಂದಿರದಲ್ಲಿ ಫೆಬ್ರವರಿ ೭ ರಂದು ಬಿಡುಗಡೆ ಮಾಡುತ್ತಿದ್ದೇವೆ. ಒಂದು ಗಂಟೆಯ ಕಿರುಚಲನಚಿತ್ರವಾದ್ದರಿಂದ ಆರು ಆಟಗಳು ನಡೆಯಲಿದೆ. ಇಲ್ಲಿ ಬಂದ ಆದಾಯದಲ್ಲಿ ಸ್ವಲ್ಪ ಭಾಗವನ್ನು ವೃದ್ಧಾಶ್ರಮಕ್ಕೆ ನೀಡಲು ನಿರ್ಧರಿಸಿದ್ದೇವೆ. ಜನರು ಉತ್ತಮ ಸ್ಪಂದನೆ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮಾತನಾಡಿ, ನಮ್ಮ ಶಾಲೆಯಲ್ಲಿ ಓದಿದ ಹುಡುಗ ಲಿಖಿತ್ ಕುಮಾರ್, ತಾಲ್ಲೂಕಿನ ದಿಬ್ಬೂರಹಳ್ಳಿಯವನು. ನಮ್ಮ ವಿದ್ಯಾಸಂಸ್ಥೆಯಲ್ಲಿ ಓದುವಾಗಲೇ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಿದ್ದ. ಕ್ರಿಯಾಶೀಲವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದ. ನಮ್ಮಲ್ಲಿ ಪಿಯುಸಿ ಓದಿದ ನಂತರ ಮೈಸೂರಿನಲ್ಲಿ ರವಿವರ್ಮ ಆರ್ಟ್ ಇನ್ಸ್ ಟಿಟ್ಯೂಟ್ ನಲ್ಲಿ ವಿಷುವಲ್ ಆರ್ಟ್ಸ್ ನಲ್ಲಿ ಪದವಿಯನ್ನು ಪಡೆದಿದ್ದಾನೆ. ನಮ್ಮ ತಾಲ್ಲೂಕಿನ ಹುಡುಗ ಒಂದು ಚಿತ್ರವನ್ನು ನಿರ್ದೇಶಿಸಿರುವುದು, ಅದರಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಿರುವುದು ನಮಗೆ ಅಭಿಮಾನದ ಸಂಗತಿ. ನಾಮು ಚಿತ್ರ ವೀಕ್ಷಣೆ ಮಾಡಿದ್ದು, ಉತ್ತಮವಾಗಿ ಮೂಡಿಬಂದಿದೆ. ಜನರು ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಡಿ.ಎಸ್.ನಿರಂಜನ್, ನಿಖಿಲ್, ತಬ್ರೇಜ್, ಆಕಾಶ್, ಶೀಹರ್ಷ, ಆರಿಫ್ ಹಾಜರಿದ್ದರು.
- Advertisement -
- Advertisement -
- Advertisement -