ತಾಲೂಕಿನ ಹಂಡಿಗನಾಳ ಬಳಿಯ ಅಮ್ಮನಕೆರೆ ಒತ್ತುವರಿ ಕಾರ್ಯಾಚರಣೆಗೆ ತಾಲೂಕು ಆಡಳಿತ ಮುಂದಾಗಿದ್ದು ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಕೆರೆಯ ಒತ್ತುವರಿಯಾದ ಜಾಗ ಹಾಗೂ ಕೆರೆಯ ಅಚ್ಚುಕಟ್ಟಿಗೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಶಿಡ್ಲಘಟ್ಟ ನಗರಕ್ಕೆ ಹೊಂದಿಕೊಂಡಿರುವ ನಗರದ ಉಗಮದೊಂದಿಗೆ ನಂಟು ಬೆಳೆಸಿಕೊಂಡ ಅಮ್ಮನಕೆರೆಯ ಸಾಕಷ್ಟು ಭಾಗ ಒತ್ತುವರಿ ಆಗಿದೆ.
ಕೆರೆಗೆ ನೀರು ಹರಿಯುವ ರಾಜಕಾಲುವೆಗಳನ್ನು ಸಹ ಒತ್ತುವರಿದಾರರು ಬಿಟ್ಟಿಲ್ಲ. ಇದರಿಂದಾಗಿ ಕೆರೆಗೆ ನೀರು ಹರಿಯದ ಸ್ಥಿತಿ ನಿರ್ಮಾಣ ಆಗಿದೆ. ಸಾಲದೆಂಬಂತೆ ಕೆರೆಯ ಉದ್ದಗಲಕ್ಕೂ ಜಾಲಿ ಮರಗಳು ಬೆಳೆದು ನಿಂತಿದ್ದು ಕೆರೆಯು ತನ್ನ ಅಸ್ತಿತ್ವವನ್ನೆ ಕಳೆದುಕೊಂಡಂತಿದೆ.
ಕೆರೆಯ ಒತ್ತುವರಿಯನ್ನು ತೆರೆವುಗೊಳಿಸಿ ಕೆರೆಯನ್ನು ಉಳಿಸಿ ಎನ್ನುವ ಕೂಗು ಸಾಕಷ್ಟು ದಿನಗಳಿಂದ ಕೇಳಿ ಬರುತ್ತಿದ್ದು ಇಂದು ತಹಸೀಲ್ದಾರ್ ಅಜಿತ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಹಂಡಿಗನಾಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಮೊದಲಿಗೆ ಕೆರೆಗೆ ಸಂಬಂಧಿಸಿದ ನಕ್ಷೆ, ಎಲ್ಲೆಗಳನ್ನು ಪರಿಶೀಲಿಸಿ ನಂತರ ಕೆರೆಯ ಒತ್ತುವರಿ ಹಾಗೂ ಅಚ್ಚು ಕಟ್ಟು ಪ್ರದೇಶವನ್ನು ವೀಕ್ಷಿಸಿದರು.
ಈ ಹಿಂದೆಯೆ ಕೆರೆಯ ಅಚ್ಚುಕಟ್ಟನ್ನು ಗುರ್ತಿಸಿ ಟ್ರಂಚ್ ನಿರ್ಮಿಸಿದ್ದರೂ ಸುತ್ತ ಮುತ್ತಲಿನ ರೈತರು ಟ್ರಂಚ್ನ ಕಾಲುವೆಯನ್ನು ದಾಟಿ ಕೆರೆಯ ಭಾಗದ ಒತ್ತುವರಿಯನ್ನು ಮುಂದುವರೆಸಿದ್ದು ಕಣ್ಣಿಗೆ ಬಿತ್ತು.
ಕೆರೆಯ ಸುತ್ತ ಹಾಗೂ ಒತ್ತುವರಿ ಭಾಗವನ್ನು ಸುತ್ತಾಡಿದ ತಹಸೀಲ್ದಾರರು, ಕೆರೆಯ ಅಂಗಳದಲ್ಲಿನ ಜಾಲಿ ಮರಗಳನ್ನು ಹಂಡಿಗನಾಳ ಗ್ರಾಮ ಪಂಚಾಯಿತಿಯವರಿಗೆ ಹರಾಜು ಪ್ರಕ್ರಿಯೆ ಮೂಲಕ ಕಡಿದು ಮಾರಾಟ ಮಾಡಲು ಸೂಚಿಸಿದರು.
ನಂತರ ಕೆರೆಯ ಅಂಗಳದಲ್ಲಿ ಜಾಲಿ ಮರಗಳ ಬದಲಿಗೆ ಪರಿಸರ ಸ್ನೇಹಿ ಸಸಿಗಳನ್ನು ನೆಟ್ಟು ಬೆಳೆಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಶೀಘ್ರದಲ್ಲೆ ಕೆರೆಯ ಒತ್ತುವರಿಯ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದರು.
ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯರದ ಜಯರಾಂ, ಎ.ಎಂ.ತ್ಯಾಗರಾಜ್, ರೈತ ಸಂಘದ ಜೆ.ವಿ.ವೆಂಕಟಸ್ವಾಮಿ, ರವಿಪ್ರಕಾಶ್, ಪ್ರತೀಶ್, ಮುರಳಿ ಇನ್ನಿತರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -