29 C
Sidlaghatta
Monday, June 30, 2025

ತಾಲ್ಲೂಕಿನ ಆರ್ಥಿಕ ಪರಿಸ್ಥಿತಿ ರೇಷ್ಮೆಯನ್ನು ಅವಲಂಬಿಸಿದೆ

- Advertisement -
- Advertisement -

ರೇಷ್ಮೆ ಉದ್ದಿಮೆಯನ್ನು ನಂಬಿಕೊಂಡು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಿಡ್ಲಘಟ್ಟ ನಗರದ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ನಗರದ ಜೊತೆಗೆ ತಾಲ್ಲೂಕಿನಾದ್ಯಂತ ಈ ಉದ್ದಿಮೆಯನ್ನು ಜನರು ಅವಲಂಬಿತರಾಗಿದ್ದಾರೆ ಎಂದು ರೇಷ್ಮೆ ವಿಜ್ಞಾನಿ ಮಹೇಶ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬುಧವಾರ ಆಗಮಿಸಿದ್ದ ಯಲಹಂಕದ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚಿಟ್ಟೆಯಿಂದ ಬಟ್ಟೆಯವರೆಗೆ ಸಾಗುವ ರೇಷ್ಮೆ ಉದ್ದಿಮೆಯನ್ನು ನಂಬಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ. ರಾಜ್ಯದಲ್ಲೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಶಿಡ್ಲಘಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಾಸರಿ ದಿನಕ್ಕೆ 40 ಸಾವಿರ ಕೆಜಿ ರೇಷ್ಮೆ ಗೂಡನ್ನು ಮಾರಾಟ ಮಾಡಲಾಗುತ್ತದೆ. ಬಹಿರಂಗ ಹರಾಜಿನ ಮೂಲಕ ರೇಷ್ಮೆ ಗೂಡನ್ನು ರೀಲರುಗಳು ಕೊಂಡು ಕೌಂಟರಿನಲ್ಲಿ ಹಣ ಕಟ್ಟಿ ನಂತರ ಒಯ್ಯುತ್ತಾರೆ. ಮಾರಾಟ ಮಾಡಿದ ರೈತರು ತಮ್ಮ ಹಣವನ್ನು ಕೌಂಟರಿನಲ್ಲಿ ಪಡೆದು ಹಿಂದಿರುಗುತ್ತಾರೆ. ರಾಜ್ಯ ಹಾಗೂ ನೆರೆ ರಾಜ್ಯದ ರೈತರು ಇಲ್ಲಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದೆಂಬ ಆಶಾಭಾವನೆಯಿಂದ ಬರುತ್ತಾರೆ ಎಂದು ವಿವರಿಸಿದರು.
ಚಾಕಿ, ಹುಳುಮನೆ, ಹಿಪ್ಪುನೇರಳೆ ಬೇಸಾಯ, ರೇಷ್ಮೆ ನೂಲು ಬಿಚ್ಚಾಣಿಕೆ ಘಟಕ, ಹುರಿ ನೂಲು ತಯಾರಿಕಾ ಘಟಕ ಮುಂತಾದವುಗಳನ್ನು ನಡೆಸುತ್ತಾ ನೇರವಾಗಿ ಅನೇಕರು ಅವಲಂಬಿತರಾಗಿದ್ದಾರೆ. ಇನ್ನುಳಿದಂತೆ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಒಲೆ ಹಚ್ಚಲು ಬಳಸುವ ಹಳೆಯ ಟೈರುಗಳನ್ನು ಮಾರುವವರು, ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಬಳಸಬೇಕಿರುವ ಹಳೆಯ ವೃತ್ತಪತ್ರಿಕೆಗಳನ್ನು ಮಾರುವವರು, ಹೋಟೆಲಿನವರು, ಚಹಾ ಅಂಗಡಿಯವರು, ಬಿದಿರು ಕೆಲಸಗಾರರು ಮತ್ತಿತರರು ಪರೋಕ್ಷವಾಗಿ ಈ ಉದ್ದಿಮೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಇಡೀ ತಾಲ್ಲೂಕಿನ ಆರ್ಥಿಕ ಪರಿಸ್ಥಿತಿ ರೇಷ್ಮೆಯನ್ನು ಅವಲಂಬಿಸಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಕರೆತಂದಿದ್ದ ಯಲಹಂಕದ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಸಂಪತ್ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಸಮುದಾಯಗಳು ಮತ್ತು ಆಚರಣೆಗಳು’ ಎಂಬ ವಿಷಯವಿದೆ. ಅದರ ಭಾಗವಾಗಿ ರೇಷ್ಮೆಯನ್ನೇ ಅವಲಂಬಿಸಿರುವ ಜನಜೀವನ, ಅವರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಿತಿ, ನೋವು ನಲಿವು, ಕಷ್ಟ ನಷ್ಟಗಳು ಮುಂತಾದ ಹಲವು ಆಯಾಮಗಳನ್ನು ಪ್ರತ್ಯಕ್ಷವಾಗಿ ಕಂಡು ಅಭ್ಯಸಿಸಲು ವಿದ್ಯಾರ್ಥಿಗಳನ್ನು ಕರೆತಂದಿದ್ದೇವೆ. ರೇಷ್ಮೆ ಗೂಡಿನ ಮಾರುಕಟ್ಟೆ, ಚಾಕಿ, ಹುಳು ಸಾಕಾಣಿಕೆ, ರೀಲಿಂಗ್, ಟ್ವಿಸ್ಟಿಂಗ್ ಮುಂತಾದವುಗಳನ್ನು ತೋರಿಸಲಿದ್ದೇವೆ’ ಎಂದು ನುಡಿದರು.
ರೇಷ್ಮೆ ಸಹಾಯಕ ನಿರ್ದೇಶಕ ರತ್ನಯ್ಯಶೆಟ್ಟಿ ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!