ಶನಿವಾರ ಮುಂಜಾನೆ ನಗರದ ನೆಹರೂ ಕ್ರೀಡಾಂಗಣವು ಜನರೇ ಇಲ್ಲದೆ ಬಿಕೋ ಎನ್ನುತ್ತಿತ್ತು. ಸದಾ ಮುಂಜಾನೆ ಕ್ರೀಡಾಪಟುಗಳಿಂದ, ವ್ಯಾಯಾಮ ಮಾಡುವವರು, ವಾಕಿಂಗ್ ಮಾಡುವವರಿಂದ ತುಂಬಿರುತ್ತಿದ್ದ ನೆಹರೂ ಕ್ರೀಡಾಂಗಣದಲ್ಲಿ ಇವರುಗಳು ಯಾರೂ ಕಂಡುಬರಲಿಲ್ಲ.
ಇದಕ್ಕೆ ಕಾರಣ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ವತಿಯಿಂದ ಶನಿವಾರ ಮುಂಜಾನೆ ನಂದಿಬೆಟ್ಟಕ್ಕೆ ಚಾರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಸದಸ್ಯರು ರಜೆಯಲ್ಲಿ ಚಾರಣ ಹೋಗಬೇಕೆಂದು ಆಲೋಚಿಸಿ ಕ್ರೀಡಾಂಗಣಕ್ಕೆ ಬರುವವರಿಗೆಲ್ಲಾ ವಿಷಯವನ್ನು ಮುಟ್ಟಿಸಿದ್ದಾರೆ. ಮಕ್ಕಳು, ಹಿರಿಯರು, ಮುದುಕರು ಎಂಬ ಬೇಧವಿಲ್ಲದೆ 80 ಮಂದಿ ತಯಾರಾಗಿದ್ದಾರೆ.
‘ಮುಂಜಾನೆ ಐದು ಗಂಟೆಗೆ ಶಿಡ್ಲಘಟ್ಟವನ್ನು ಬಿಟ್ಟೆವು. ವಾಹನಗಳಿದ್ದವರು ಇಲ್ಲದಿರುವವರನ್ನು ಕರೆತಂದರೆ, ತಿಂಡಿ ಹಾಗೂ ಕೆಲವರನ್ನು ಕರೆದೊಯ್ಯಲು ಟಾಟಾ ಏಸ್ ಬಾಡಿಗೆಗೆ ತಂದಿದ್ದೆವು. ಎಲ್ಲರೂ ನಂದಿ ಬೆಟ್ಟದ ಬುಡವನ್ನು ತಲುಪಿದೆವು. ಸುಲ್ತಾನ್ಪೇಟೆಯಿಂದ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಿದೆವು. ಮಕ್ಕಳಿಗೆ ಗಾಂಧೀಜಿ ನಂದಿ ಬೆಟ್ಟಕ್ಕೆ ಬಂದಿದ್ದಾಗ ಹತ್ತಿದ ಮೆಟ್ಟಿಲುಗಳಿವು. ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇದೇ ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಹತ್ತುತ್ತಿದ್ದರು ಎಂದು ಸಾಧಕರ ಬಗ್ಗೆ ತಿಳಿಸುತ್ತಾ ಸ್ಫೂರ್ತಿ ತುಂಬುತ್ತಾ ಬೆಟ್ಟವನ್ನು ಹತ್ತಿದೆವು. ಮಕ್ಕಳು 7.30ಕ್ಕೆಲ್ಲಾ ಬೆಟ್ಟವನ್ನು ಹತ್ತಿಬಿಟ್ಟರು. ವಯಸ್ಕರು ನಿಧಾನವಾಗಿ ಹತ್ತಿದರು’ ಎಂದು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ ತಿಳಿಸಿದರು.
’ಬೆಟ್ಟ ಹತ್ತಿದವರೆಲ್ಲಾ ಬೆಟ್ಟವನ್ನು ಸುತ್ತಾಡಿ, ದೇವಾಲಯಕ್ಕೆ ಭೇಟಿ ನೀಡಿದೆವು. ಕನಿಂಗ್ಹ್ಯಾಂನ ‘ಓಕ್ಲ್ಯಾಂಡ್ಸ್’ನಲ್ಲಿ ಗಾಂಧೀಜಿಯವರು ವಿಶ್ರಾಂತಿ ಪಡೆದುದರ ಸವಿನೆನಪಿಗಾಗಿ ಅದನ್ನೀಗ ’ಗಾಂಧಿನಿಲಯ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಮಕ್ಕಳಿಗೆ ವಿವರಿಸಿ ಅಲ್ಲಿರುವ ಗಾಂಧೀಜಿಯವರ ಪ್ರತಿಮೆಯನ್ನು ತೋರಿಸಿದೆವು. ಲಾರ್ಡ್ ಕಬ್ಬನ್ ನಿರ್ಮಿಸಿದ್ದ ಕಬ್ಬನ್ ಹೌಸ್ ಅನ್ನು ಈಗ ನೆಹರೂ ನಿಲಯವೆನ್ನುತ್ತಾರೆ ಎಂದು ವಿವರಿಸಿ ನೆಹರೂ ಪ್ರತಿಮೆಯನ್ನು ತೋರಿಸಿ ಅಲ್ಲಿ ನಡೆದಿದ್ದ ಸಾರ್ಕ್ ಸಮ್ಮೇಳನದ ಬಗ್ಗೆಯೂ ತಿಳಿಸಿದೆವು. ಮಕ್ಕಳಿಗೆ ಕೆಲ ಆಟಗಳನ್ನು ಆಡಿಸಿ, ಹಾಡು, ನೃತ್ಯ ಬಲ್ಲವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ನಡೆಸಿದೆವು. ಕಟ್ಟಿಸಿಕೊಂಡು ಹೋಗಿದ್ದ ತಿಂಡಿಯನ್ನು ಎಲ್ಲರೂ ತಿಂದೆವು’ ಎಂದು ಅವರು ವಿವರಿಸಿದರು.
‘ನೆಹರೂ ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಕಾಳಜಿ ವಹಿಸುವವರು ಹೆಚ್ಚಾದಂತೆ ಕ್ರೀಡಾಂಗಣಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು. ಅದರಲ್ಲೂ ರಜೆಯಲ್ಲಿ ಮಕ್ಕಳಿಗೆ ಚಾರಣ ಮೊದಲಾದ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಜ್ಞಾನ ತುಂಬಿಸುವ ಆಲೋಚನೆ ಬಂದಿತು. ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು, ಹಿರಿಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ನಮಗೆ ಉತ್ಸಾಹ ತಂದಿದೆ. ಮುಂದೆ ಇನ್ನೂ ಚಾರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ’ ಎಂದು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿರಂಜನ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಜೆ.ವಿ.ಸುರೇಶ್, ಜಯಂತಿಗ್ರಾಮ ನಾರಾಯಣಸ್ವಾಮಿ, ಉದ್ದಣ್ಣ ಸುರೇಶ್, ಲಯನ್ ಕ್ರೀಡಾ ಸಂಸ್ಥೆಯ ಗೌರವಾಧ್ಯಕ್ಷ ಮುನಿರಾಜು, ಬದ್ರಿನಾಥ್, ವೀಣಾ, ಶಿವಪ್ಪ, ದಾಕ್ಷಾಯಿಣಿ, ಸುಂದರಾಚಾರಿ, ಜಗದೀಶ್, ಜಬೀವುಲ್ಲ ಚಾರಣದಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -