ದೇಹ ಮತ್ತು ಮಾನಸಿಕ ಆರೋಗ್ಯದ ಜೊತೆಯಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡಲ್ಲಿ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಅನಿವಾಸಿ ಭಾರತೀಯ ಕನ್ನಡ ಲೇಖಕಿ ಪಿ.ಆರ್.ಮೀರಾ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿ ಮಕ್ಕಳಿಗೆ ಸಿಹಿ ಹಂಚಿ ಅವರು ಮಾತನಾಡಿದರು.
ನಮ್ಮ ಬದುಕು ಸುತ್ತಮುತ್ತಲಿನ ಪರಿಸರವನ್ನು ಅವಲಂಬಿಸಿರುವುದರಿಂದ ಪರಿಸರವನ್ನು ಚೆನ್ನಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು. ಮಕ್ಕಳು ಕಥೆಗಳನ್ನು ಕೇಳಬೇಕು ಮತ್ತು ಓದಬೇಕು. ಅದರಿಂದ ಕಲ್ಪನಾ ಶಕ್ತಿ ವಿಸ್ತಾರಗೊಳ್ಳುತ್ತದೆ ಮತ್ತು ತಪ್ಪು ಒಪ್ಪುಗಳ ತಿಳುವಳಿಕೆ ಮೂಡುತ್ತದೆ. ಪ್ರತಿಯೊಂದು ಕ್ಷಣದಲ್ಲೂ ಹೊಸತನವಿರುತ್ತದೆ. ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಲ್ಲಿ ಕಳೆದು ಹೋದ ದಿನಗಳ ಬಗ್ಗೆ ಪಶ್ಚಾತ್ತಾಪ ಉಂಟಾಗದು. ಮನಸ್ಸಿನಲ್ಲಿ ಹುಟ್ಟುವ ಆಲೋಚನೆಗಳು ಸದಾ ಒಳಿತಾಗಿರಬೇಕು. ಕೀಳರಿಮೆಯಿಂದ ಕಳಚಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಶಾಲೆಯ ಶಿಕ್ಷಕರಾದ ನಾಗಭೂಷಣ್, ರಾಮಕೃಷ್ಣ, ವೆಂಕಟರೆಡ್ಡಿ, ಶಿವಪ್ಪ, ರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -