ಪೌಷ್ಠಿಕ ಮತ್ತು ಸಮತೋಲನ ಆಹಾರ ಮಕ್ಕಳಿಗೆ ನೀಡುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದು ಎಂದು ವೈದ್ಯರಾದ ಡಾ.ಡಿ.ಕೆ.ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ಒತ್ತಡ ಹೇರದಂತೆ ಅವರ ಸೃಜನಶೀಲತೆ ಅರಳುವಂತಹ ವಾತಾವರಣವನ್ನು ಶಾಲಾ ಪರಿಸರದಲ್ಲಿ ನಿರ್ಮಾಣ ಮಾಡಬೇಕು. ಉತ್ತಮ ಆರೋಗ್ಯಪೂರ್ಣವಾದ ದೇಹದಲ್ಲಿ ಒಳ್ಳೆಯ ಆಲೋಚನೆಗಳು ತುಂಬಬೇಕು. ದೇಹದ ಆರೋಗ್ಯಕ್ಕೆ ಸಮತೋಲನ ಆಹಾರ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯ ಮಾರ್ಗದರ್ಶನ ಅಗತ್ಯವಿದೆ. ಗ್ರಾಮೀಣ ಪರಿಸರದಿಂದ ಆತ್ಮಸ್ಥೈರ್ಯವುಳ್ಳ ಪ್ರತಿಭೆಗಳು ಹೊರಹೊಮ್ಮಬೇಕು ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನೀರಿನ ಕೊರತೆಯಿಂದ, ಅಂತರ್ಜಲದ ಕುಸಿತದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಶಾಶ್ವತ ನೀರಾವರಿಗಾಗಿ ಎಲ್ಲರ ಸಹಕಾರವನ್ನು ಕೋರಿದರು.
ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ನಂದೀಶ್ ಅವರನ್ನು ಸನ್ಮಾನಿಸಿದರು. ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗುಡಿಯಪ್ಪ, ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಮಂಜುನಾಥ್, ಜಯಣ್ಣ, ಮುನೇಗೌಡ, ರಮೇಶ್, ಉಮಾ ರವಿಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -