ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಬಿನ್(ಜಾಲರಿ) ಹಂಚಿಕೆ ಪ್ರಕ್ರಿಯೆ ಶನಿವಾರದಿಂದ ಆರಂಭವಾಗಲಿದೆ. ಕೆಲವೇ ದಿನಗಳಲ್ಲಿ ಇ–ಹರಾಜು ಪ್ರಕ್ರಿಯೆ ಕೂಡ ಪ್ರಾರಂಭವಾಗಲಿದೆ. ಇದರಿಂದ ರೈತರಿಗೆ ಮತ್ತು ರೀಲರುಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್. ಪ್ರಭಾಕರ್ ತಿಳಿಸಿದರು.
ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸಾವಿರಾರು ಲಾಟುಗಳು ರೇಷ್ಮೆ ಗೂಡು ಆಗಮಿಸುತ್ತವೆ. ಈ ಹಿಂದೆ ದೂರದ ಊರುಗಳಿಂದ ಬರುತ್ತಿರುವ ರೈತರುಗಳಿಗೆ ಜಾಲರಿಗಳು ಸಿಗದೆ, ನೆಲದ ಮೇಲೆ ಗೂಡನ್ನು ಹಾಕುವಂತಹ ಪರಿಸ್ಥಿತಿಯಿತ್ತು. ಕೆಲವು ಮಂದಿ ಮಧ್ಯವರ್ತಿಗಳು ಜಾಲರಿಗಳ ಮೇಲೆ ಹೆಸರುಗಳನ್ನು ಬರೆದು, ಅವುಗಳನ್ನು ರೈತರಿಗೆ ಮಾರಾಟ ಮಾಡಿಕೊಳ್ಳುತ್ತಿದ್ದ ಬಗ್ಗೆಯೂ ದೂರುಗಳು ಕೇಳಿ ಬರುತ್ತಿದ್ದವು. ಇದರಿಂದ ರೈತರಿಗೆ ಅನ್ಯಾಯವಾಗುತ್ತಿತ್ತು.
ಆದ್ದರಿಂದ ಬಿನ್(ಜಾಲರಿ) ಹಂಚಿಕೆ ಪದ್ಧತಿಯನ್ನು ಜಾರಿಗೆ ತಂದಿದ್ದು, ಶನಿವಾರದಿಂದಲೇ ಆರಂಭವಾಗಲಿದೆ. ರೈತರು ತರುವಂತಹ ಗೂಡಿನ ಪ್ರಮಾಣಕ್ಕೆ ತಕ್ಕಂತೆ ೫೦ ಕೆ.ಜಿ.ಗೂಡಿಗೆ ಒಂದು ಬಿನ್ನಂತೆ ನೀಡಲಾಗುತ್ತದೆ, ಮಾರುಕಟ್ಟೆಯಲ್ಲಿನ ವಿವಿಧ ವಿಭಾಗಗಳಿಗೆ ನದಿಗಳಾದ ಹೇಮಾವತಿ, ಕಾವೇರಿ, ಕಬಿನಿ, ಪಾಪಾಗ್ನಿ, ಗಂಗಾ, ನೇತ್ರಾವತಿ, ತುಂಗಾ, ಭದ್ರಾ, ಚಿತ್ರಾವತಿ, ಶರಾವತಿ, ಯಮುನಾ, ಲಿನಾಕಿನಿ, ಕೃಷ್ಣಾ, ಅರ್ಕಾವತಿ ಎಂಬ ಹೆಸರುಗಳನ್ನು ಇಡಲಾಗಿದ್ದು, ಪ್ರತಿ ವಿಭಾಗಕ್ಕೆ ಕೌಂಟರ್, ಹರಾಜು ಕೂಗುವುದು, ತೂಕ ಮಾಡುವುದು, ಟೋಕನ್ ನೀಡುವುದು, ಹರಾಜು ಚೀಟಿಗಳನ್ನು ಕಂಪ್ಯೂಟರ್ ಕೊಠಡಿಗಳಿಗೆ ರವಾನಿಸುವ ವ್ಯವಸ್ಥೆ, ಮಾರುಕಟ್ಟೆ ಶುಲ್ಕ, ರೈತರ ಪಾಸ್ಪುಸ್ತಕ ಎಂಟ್ರಿ, ಹರಾಜು ಚೀಟಿ ವಿತರಣೆ, ಡಿ.ಟಿ.ಆರ್, ಮುಖ್ಯದ್ವಾರದ ಕಾವಲು, ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಗೂಡನ್ನು ಹೊರಗಿನಿಂದ ತೆಗೆದುಕೊಂಡು ಬರುವಂತಹ ರೈತರು ನೇರವಾಗಿ ಕೌಂಟರ್ಗೆ ಹೋಗಿ ಅಲ್ಲಿಂದ ಚೀಟಿಯನ್ನು ಪಡೆದುಕೊಂಡ ತಕ್ಷಣ ಯಾವ ವಿಭಾಗದಲ್ಲಿ ಬಿನ್ ನೀಡಲಾಗಿದೆ ಎಂಬುದು ಗೊತ್ತಾಗುತ್ತದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ, ಬಿನ್ಗಳನ್ನು ಪಡೆದುಕೊಳ್ಳಬಹುದಾಗಿದೆ. ಸ್ಥಳೀಯರಿಗೆ ಸುಮಾರು ೩೦ ಟನ್ಗಳ (೬ ಶೆಡ್ಗಳನ್ನು) ಗೂಡಿಗೆ ಸರಿಹೊಂದುವಷ್ಟು ಜಾಲರಿಗಳನ್ನು ಮೀಸಲಾಗಿಡಲಾಗುತ್ತದೆ. ಆದ್ಯತೆಯ ಮೇರೆಗೆ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ೬೦ ರಿಂ೭೦ ಲಾಟುಗಳು, ೬ ರಿಂದ ಬೆಳಗಿನ ಜಾವ ೩ ಗಂಟೆಯವರೆಗೆ ೬೦ ರಿಂದ ೭೦ ಲಾಟುಗಳು, ಬೆಳಿಗ್ಗೆ ೩ ರಿಂದ ೯ ಗಂಟೆವೆರೆಗೆ ೭೦೦ ರಿಂದ ೮೦೦ ಲಾಟುಗಳು ಬರುತ್ತವೆ. ಯಾವ ರೈತರಿಗೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ರೈತರು ಸಹಕಾರ ನೀಡಬೇಕು ಎಂದರು.
ಇದೇ ವೇಳೆ ಇ-–ಹರಾಜು ಪ್ರಕ್ರಿಯೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲು ರೈತರಿಗೆ ಟೀ ಶರ್ಟ್ ಹಾಗೂ ಟೋಪಿಗಳನ್ನು ಇಲಾಖೆಯಿಂದ ವಿತರಣೆ ಮಾಡಲಾಯಿತು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಲಕ್ಷೀಪತಿರೆಡ್ಡಿ, ಉಪನಿರ್ದೇಶಕರಾದ ಮೋಯಿನುದ್ದೀನ್, ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಬಿ.ಆರ್.ಸುಧಾಕರ್, ಸಿ.ಆರ್.ಆಂಜನೇಯರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -