ಹಿಂದೆ ಪ್ರತಿ ಗ್ರಾಮದಲ್ಲೂ ಜಲ ಮೂಲಗಳಾದ ಕುಂಟೆಗಳಲ್ಲಿ ಮತ್ತು ತೋಟಗಳಲ್ಲಿನ ನೀರಿನ ಹೊಂಡಗಳಲ್ಲಿ ಕಮಲದ ಹೂ ಬೆಳೆಯುವುದು ಸಾಮಾನ್ಯವಾಗಿತ್ತು. ಆದರೆ ಅಂತರ್ಜಲ ಪಾತಾಳಕ್ಕಿಳಿದಂತೆ, ಮಳೆಯು ಕೈಕೊಟ್ಟ ಹಿನ್ನೆಲೆಯಲ್ಲಿ ಗ್ರಾಮದ ಕುಂಟೆಗಳು, ಕೆರೆಗಳು ಒಣಗಿ ನಿಂತಿವೆ. ಅಪರೂಪದ ದೃಶ್ಯವೆಂಬಂತೆ ತಾಲ್ಲೂಕಿನ ಮಲ್ಲಹಳ್ಳಿಯ ಕುಂಟೆಯ ತುಂಬ ಕಮಲದ ಹೂಗಳು ಅರಳಿ ನಿಂತಿದ್ದು, ದಿಬ್ಬೂರಹಳ್ಳಿ ಮಾರ್ಗವಾಗಿ ಹೋಗುವವರಿಗೆ ಆಹ್ಲಾದಕರ ದೃಶ್ಯವಾಗಿ ಕಂಡುಬರುತ್ತಿದೆ.
ಜಲಪುಷ್ಪವಾದ ಈ ಕಮಲದ ಹೂವು ವಿಷ್ಣು, ಬ್ರಹ್ಮ, ಸರಸ್ವತಿ ಮತ್ತು ಲಕ್ಷ್ಮಿಗೆ ಪ್ರಿಯವಾಗಿದೆ. ಕಮಲದ ಹೂವು ಸೌಂದರ್ಯ ಮತ್ತು ಶುದ್ಧತೆಯ ಸಂಕೇತ. ಅರಳಿರುವ ಕಮಲದ ದಳಗಳನ್ನು ಆತ್ಮದ ವಿಸ್ತರಣೆಯ ರೂಪವಾಗಿ ನೋಡಲಾಗುತ್ತದೆ. ಬೌದ್ಧ ಜನಾಂಗದಲ್ಲಿ ಕಮಲದ ಹೂವನ್ನು ಆತ್ಮ ಸ್ವರೂಪದ ಶುದ್ಧತೆಗೆ ಹೋಲಿಸಲಾಗುತ್ತದೆ.
ಮಲ್ಲಹಳ್ಳಿ ಗ್ರಾಮದಲ್ಲಿ ಚರಂಡಿಯ ನೀರು ಮತ್ತು ಓವರ್ ಹೆಡ್ ಟ್ಯಾಂಕಿಗೆ ತುಂಬಿ ಹರಿದು ಹೋಗುವ ನೀರೆಲ್ಲಾ ಕುಂಟೆಗೆ ಬಂದು ಸೇರುವ ಕಾರಣ ಸದಾ ನೀರಿರುತ್ತದೆ. ಸಾಕಷ್ಟು ಜೊಂಡು ಕೂಡ ಇಲ್ಲಿ ಆವರಿಸಿದೆ. ಆದರೂ ಕಮಲದ ಹೂಗಳು ಸಾಕಷ್ಟು ಸಂಖ್ಯೆಯಲ್ಲಿ ಅರಳಿ ನಿಂತಿರುತ್ತವೆ.
ಗ್ರಾಮದ ಪ್ರವೇಶದಲ್ಲಿ ಕಣ್ಣಿಗೆ ಮುದವನ್ನು ನೀಡುವುದರೊಂದಿಗೆ ಈ ಪುಷ್ಪಗಳು ಗ್ರಾಮಕ್ಕೆ ಆದಾಯವನ್ನೂ ತರುತ್ತವೆ. ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಕಮಲದ ಹೂಗಳಿಗೆ ಬೇಡಿಕೆ ಬಂದಾಗ ಹೂ ವ್ಯಾಪಾರಸ್ಥರು ಬಂದು ಹೂಗಳನ್ನು ಕೊಂಡು ಕುಯ್ದುಕೊಂಡು ಹೋಗುತ್ತಾರೆ. ಗ್ರಾಮಸ್ಥರು ಆ ಹಣವನ್ನು ಗ್ರಾಮದ ಗಣೇಶನ ದೇವಸ್ಥಾನದ ಪೂಜೆಗೆ, ಅಭಿವೃದ್ಧಿಗೆ ಬಳಸುವರೆಂದು ಗ್ರಾಮಸ್ಥ ನಾಗೇಶ್ ಹೇಳುತ್ತಾರೆ.
ಈ ಬಾರಿ ಸಾಕಷ್ಟು ಜೊಂಡು ಬೆಳೆದಿದೆ. ಅವನ್ನು ತೆಗೆಸಬೇಕಿದೆ. ಆಗ ಕುಂಟೆಯ ತುಂಬಾ ಕಮಲವೇ ಆವರಿಸುತ್ತದೆ. ಇದರಿಂದ ಇನ್ನಷ್ಟು ಆದಾಯವೂ ಗ್ರಾಮಕ್ಕೆ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.
- Advertisement -
- Advertisement -
- Advertisement -