ಪ್ರತಿದಿನ ಕೇವಲ 60 ಲೀಟರ್ ಹಾಲು ಸಂಗ್ರಹಣೆಯಿಂದ ಪ್ರಾರಂಭವಾಗಿ ಈಗ 300 ಲೀಟರ್ ಹಾಲು ಸಂಗ್ರಹಿಸುತ್ತಾ ತನ್ನದೇ ಸ್ವಂತವಾದ ಕಟ್ಟಡವನ್ನು ಹೊಂದುತ್ತಿರುವ ಕುದುಪಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘ ಇತರರಿಗೆ ಮಾದರಿಯಾಗಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅಭಿನಂದಿಸಿದರು.
ತಾಲ್ಲೂಕಿನ ಕುದುಪಕುಂಟೆ ಗ್ರಾಮದಲ್ಲಿ ಗುರುವಾರ ವೀರಮಾರಮ್ಮದೇವಿ ನೂತನ ದೇವಸ್ಥಾನ ಪ್ರತಿಷ್ಠಾಪನೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೈನುಗಾರಿಕೆಯು ನಮ್ಮ ಭಾಗದಲ್ಲಿ ಹಲವರ ಸಂಸಾರ ನಿರ್ವಹಣೆಗೆ ಸಹಕಾರಿಯಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಸರಿಯಾಗಿ ನಿರ್ವಹಿಸುತ್ತಿರುವುದಕ್ಕೆ ಅವುಗಳ ಪ್ರಗತಿಯು ಧ್ಯೋತಕವಾಗಿದೆ. ಇದು ಗ್ರಾಮದ ಆರ್ಥಿಕತೆಯನ್ನೂ ಬೆಳೆಸಲು ಸಹಕಾರಿಯಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ವಿವಿಧ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ನೀಡುವ ಮೂಲಕ ಇನ್ನಷ್ಟು ಪ್ರಗತಿಯನ್ನು ಸಾಧಿಸಬೇಕೆಂದು ಹಾರೈಸಿದರು.
ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿ ಧಾರ್ಮಿಕ ಮತ್ತು ಡೈರಿ ಕಟ್ಟಡದ ನಿರ್ಮಾಣ ಒಂದೇ ದಿನ ಆಗುತ್ತಿರುವುದು ಶುಭಸೂಚಕ. ದೇವರ ಆಶೀರ್ವಾದವಿದ್ದಲ್ಲಿ ಹಾಲೆಂಬ ಅಮೃತವು ಹೆಚ್ಚಾಗಿ ಗ್ರಾಮದವರಿಗೆ ಸಂಪತ್ತನ್ನು ತರಲಿ. ಈ ಭಾಗದ ಜನರು ಹಿಂದೆ ಮಠಕ್ಕೆ ದವಸ ಧಾನ್ಯಗಳಿಗಾಗಿ ಬಂದಾಗ ದಾನ ನೀಡಿರುವ ಕೊಡುಗೈಯವರು. ಮನಸ್ಸಿದ್ದಂತೆ ಮಾದೇವ ಎಂಬ ಮಾತಿನಂತೆ ಇತರರಿಗೆ ಕೊಟ್ಟಷ್ಟೂ ನಿಮ್ಮ ಸಂಪತ್ತು ಹೆಚ್ಚುತ್ತದೆ ಎಂದು ಹೇಳಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಗುಡಿಯಪ್ಪ, ನಿರ್ದೇಶಕ ವೈ.ಬಿ.ಅಶ್ವತ್ಥನಾರಾಯಣ, ಕೆ.ಎನ್.ಆಂಜನೇಯರೆಡ್ಡಿ, ವಿ.ಶ್ರೀನಿವಾಸ್, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭವ್ಯಮಂಜುನಾಥ್, ಡಿ.ಎಸ್.ಎನ್.ರಾಜು, ಕೆ.ಆನಂದ್, ತಾಲ್ಲೂಕು ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜು, ಅಶ್ವತ್ಥನಾರಾಯಣರೆಡ್ಡಿ, ಶ್ರೀನಿವಾಸರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -