16.1 C
Sidlaghatta
Thursday, January 15, 2026

ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಸಾಧಕ

- Advertisement -
- Advertisement -

ಸರ್ಕಾರಿ ಶಾಲೆಯೊಂದಕ್ಕೆ ಸಮುದಾಯದ ನೆರವು ದೊರೆತಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಸಾಧನೆ ಮಾಡಬಹುದು ಎಂಬುದಕ್ಕೆ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ ವಿದ್ಯಾರ್ಥಿ ಮನೋಜ್ ಸಾಕ್ಷಿಯಾಗಿದ್ದಾನೆ.
ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ ವಿದ್ಯಾರ್ಥಿ ಮನೋಜ್ ಮೂಡಬಿದ್ರೆ ಬಳಿಯಿರುವ ಎಂ.ಐ.ಟಿ.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಗ ಓದುತ್ತಿದ್ದಾನೆ. ವಿಶೇಷವೆಂದರೆ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇದುವರೆಗೂ ಓದಿರುವ ವಿದ್ಯಾರ್ಥಿಗಳಲ್ಲಿ ಎಂಜಿನಿಯರಿಂಗ್ ಕಾಲೇಜ್ ಸೇರಿರುವುದರಲ್ಲಿ ಈತನೇ ಮೊದಲಿಗ.
ಹತ್ತಿರದ ಮೇಲೂರು ಮತ್ತು ಮಳ್ಳೂರಿನಲ್ಲಿ ಸರ್ಕಾರಿ ಪ್ರೌಢಶಾಲೆಯಿದ್ದರೂ, ಗ್ರಾಮದಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದ ಮಕ್ಕಳು ಹೆಚ್ಚಿದ್ದರಿಂದ, ಗ್ರಾಮದ ಮುಖಂಡರಾದ ಚಂದ್ರೇಗೌಡ, ಕೆಂಪೇಗೌಡ, ವೇಣುಗೋಪಾಲಾಚಾರಿ ಮುಂತಾದವರು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಪ್ರೌಢಶಾಲೆಯನ್ನು 1994 ರಲ್ಲಿ ಪ್ರಾರಂಭಿಸಿದರು. ಎಂ.ಕೆ.ರೆಡ್ಡಿ ಎಂಬುವವರು ಶಾಲೆಗಾಗಿ ಭೂಮಿಯನ್ನು ದಾನವಾಗಿ ನೀಡಿದರು.
2008 ರಿಂದ ದಿ.ಸಂಜಯ್ದಾಸ್ಗುಪ್ತ ಕುಟುಂಬದವರು ಗ್ರಾಮದಲ್ಲಿ ‘ನಮ್ಮ ಮುತ್ತೂರು’ ಎಂಬ ಸಂಸ್ಥೆಯ ಮೂಲಕ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡರು. ವಿವಿಧ ದಾನಿಗಳ ಮೂಲಕ ವಿದ್ಯಾರ್ಥಿಗಳಿಗೆ ಸೋಲಾರ್ ದೀಪಗಳನ್ನು ವಿತರಿಸಿದರು. ಶಾಲೆಯಲ್ಲಿ ವಿಜ್ಞಾನದ ಲ್ಯಾಬ್ ಪ್ರಾರಂಭವಾಯಿತು. ವಿವಿಧ ಸಂಪನ್ಮೂಲ ವ್ಯಕ್ತಿಗಳು ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ವಿಜ್ಞಾನ, ಪರಿಸರ, ಇಂಗ್ಲೀಷ್, ಕ್ರೀಡೆ ಮುಂತಾದವುಗಳನ್ನು ಕಲಿಸಿದರು. ಈ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪಾಸಾದವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ಕೊಡಲು ಪ್ರಾರಂಭಿಸಿದರು.
ಈ ರೀತಿಯಾಗಿ ವಿದ್ಯಾರ್ಥಿ ವೇತನ ಪಡೆದು ಸಿ.ಇ.ಟಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಮನೋಜ್ ಎಂಜಿನಿಯರಿಂಗ್ ಸೇರಿದ್ದಾನೆ. ಬಡ ರೈತ ಕುಟುಂಬದ ಹಿನ್ನೆಯಿರುವ ಮನೋಜ್ಗೆ ಪಿಯುಸಿ ಶಿಕ್ಷಣಕ್ಕೆ ನೆರವು ನೀಡಿದ ‘ನಮ್ಮ ಮುತ್ತೂರು’ ಸಂಸ್ಥೆ ಎಂಜಿನಿಯರಿಂಗ್ ಸೇರಿಸಲೂ ಆರ್ಥಿಕವಾಗಿ ನೆರವಾಗಿದೆ.
‘ನಮ್ಮ ಶಾಲೆಯು ಪ್ರಾರಂಭವಾದಂದಿನಿಂದ ಇದುವರೆಗೂ 700 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪಾಸಾಗಿದ್ದಾರೆ. ಬಹುತೇಕ ಮಕ್ಕಳೆಲ್ಲಾ ಬಡ ಕುಟುಂಬದ ಹಿನ್ನೆಲೆಯವರೇ. ಅವರಲ್ಲಿ ಪ್ರತಿಭೆಯಿದ್ದರೂ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚಿಗೆ ಓದಲು ಮುಂದುವರೆಯುತ್ತಿಲ್ಲ. ಆದರೆ ‘ನಮ್ಮ ಮುತ್ತೂರು’ ಸಂಸ್ಥೆಯ ಅಭಿವೃದ್ಧಿ ಕೆಲಸಗಳಿಂದಾಗಿ ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇಕಾದ ಆರ್ಥಿಕ ಸಹಾಯ ಸಿಗುವ ಮೂಲಕ ಕಡಿಶೀಗೇನಹಳ್ಳಿಯ ಮನೋಜ್ ಈಗ ಎಂಜಿನಿಯರಿಂಗ್ ಓದುವಂತಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ, ನೆರವು, ಮಾರ್ಗದರ್ಶನ ಸಿಕ್ಕಲ್ಲಿ ಸಾಧಕರು ಹೊರಹೊಮ್ಮುತ್ತಾರೆ’ ಎಂದು ವಿಜ್ಞಾನ ಶಿಕ್ಷಕ ಶ್ರೀನಿವಾಸ್ ತಿಳಿಸಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!