ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸಗಳು ಮಾಡುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆಯಾದರೂ ಸರ್ಕಾರದ ಹಣಕಾಸಿನ ಪರಿಸ್ಥಿತಿಯಲ್ಲಿ ಸಮಸ್ಯೆಯಿರುವುದರಿಂದ ಅಗತ್ಯವಿರುವಷ್ಟು ಅನುಧಾನ ಬಿಡುಗಡೆಯಾಗುತ್ತಿಲ್ಲ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವಾದ ತುಮ್ಮನಹಳ್ಳಿಯಲ್ಲಿ ಶನಿವಾರ ಸುಮಾರು ೧೦೩ ಲಕ್ಷ ವೆಚ್ಚದಲ್ಲಿ ಮಳಮಾಚನಹಳ್ಳಿ- ಕೈವಾರ ರಸ್ತೆಯ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಸೇರಿದಂತೆ ದೊಡ್ಡದಾಸರಹಳ್ಳಿಯಲ್ಲಿ ೧೪.೯ ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಹಾಗೂ ಮಲ್ಲಶೆಟ್ಟಿಪುರ ಗ್ರಾಮದಲ್ಲಿ ೧೦ ಲಕ್ಷ ರೂ ವೆಚ್ಚದ ಜಗಜೀವನರಾಂ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ರಸ್ತೆಗಳು ಸಾಕಷ್ಟು ಹದೆಗೆಟ್ಟಿದ್ದು ಅಗತ್ಯಕ್ಕನುಸಾರವಾಗಿ ಕ್ಷೇತ್ರದಾದ್ಯಂತ ರಸ್ತೆ ಕಾಮಗಾರಿಗಳನ್ನು ಮಾಡುತ್ತಿದ್ದು ಇನ್ನೂ ಮಾಡಬೇಕಾಗಿರುವುದು ಇರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಮಾಡಲಾಗುವುದು ಎಂದರು.
ತಾವು ಶಾಸಕರಾದ ಮೇಲೆ ಬಂಗಾರಪೇಟೆ- ಬಾಗೇಪಲ್ಲಿ ರಸ್ತೆಯ ಗೋಣಿಮರದಹಳ್ಳಿಯವರೆಗೂ ೬ ಕಿ.ಮೀ ರಸ್ತೆ ಕಾಮಗಾರಿ ಮುಗಿದಿದ್ದು ಇದೀಗ ಇನ್ನೂ ೧೦ ಕಿ.ಮೀ ರಸ್ತೆ ಅಭಿವೃದ್ದಿ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು ಗೋಣಿಮರದಹಳ್ಳಿಯಿಂದ ಇರಗಪ್ಪನಹಳ್ಳಿಯವರೆಗೂ ರಸ್ತೆ ಅಗಲೀಕರಣ ಹಾಗು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸೇರಿದಂತೆ ಮೂಲಭೂತ ಸವಲತ್ತು ಕಲ್ಪಿಸಲು ಕಳೆದ ಮೂರೂವರೆ ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಉಳಿದ ಒಂದೂವರೆ ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರದ ಉದ್ದಗಲಕ್ಕೂ ಓಡಾಡಿ ಅಗತ್ಯಕ್ಕನುಸಾರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ತಾಲ್ಲೂಕಿನಾದ್ಯಂತ ಇರುವ ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕರು ಹೆಚ್ಚಿನ ಶ್ರಮವಹಿಸಿದ್ದು ವಿರೋಧ ಪಕ್ಷದಲ್ಲಿರುವ ನಮ್ಮ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನಗಳನ್ನು ತರುವ ಸ್ಥಿತಿಯಿದೆ. ಆದರೂ ಕ್ಷೇತ್ರದಾದ್ಯಂತ ಶಾಸಕರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದರು.
ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಸುರೇಂದ್ರ, ಸದಸ್ಯರಾದ ಅಂಬರೀಷ್, ಪದ್ಮಮ್ಮ, ರಮೇಶ್, ಮುನಿಯಪ್ಪ, ಮುಖಂಡರಾದ ಟಿ.ಕೆ.ರಾಮಕೃಷ್ಣಪ್ಪ, ಕದಿರಪ್ಪ, ಮುನಿರಾಜು, ನಾರಾಯಣಸ್ವಾಮಿರೆಡ್ಡಿ, ತಿಪ್ಪೇನಹಳ್ಳಿ ಅಂಬರೀಷ್, ನಾರಾಯಣಸ್ವಾಮಿ, ಮುನಿಯಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ಲೋಕೇಶ್, ಪಂಚಾಯತ್ ರಾಜ್ ವಿಭಾಗದ ಎಇಇ ಶಿವಾನಂದ, ಗುತ್ತಿಗೆದಾರ ದೇವರಾಜ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -