ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಸದಾ ಕಾರ್ಯನಿರ್ವಹಿಸಬೇಕು, ಬ್ಯಾಂಕ್ ಬೇಕು, ಮಾರುಕಟ್ಟೆಯ ಹೊರಗಡೆ ತೂಕ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮುಂತಾದ ಬೇಡಿಕೆಗಳನ್ನು ರೈತ ಮುಖಂಡರು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರಿಗೆ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳಿಗೆ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿನ ಹಲವಾರು ಸಮಸ್ಯೆಗಳ ಬಗ್ಗೆ ರೈತರು ವಿವರಿಸಿದರು.
ನೆರೆ ರಾಜ್ಯ ಹಾಗೂ ದೂರದ ಊರುಗಳ ಹಲವು ರೈತರಿಗೆ ಚೆಕ್ ನೀಡಿ ಸುಮಾರು ಆರೂವರೆ ಲಕ್ಷ ರೂಗಳಷ್ಟು ಒಬ್ಬ ರೀಲರು ಬಾಕಿ ಉಳಿಸಿಕೊಂಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಈಚೆಗೆ ವಿದ್ಯುತ್ ಇಲ್ಲದ ಕಾರಣ ಸಿಸಿ ಕ್ಯಾಮೆರಾ ಕೆಲಸ ಮಾಡದೆ ಸುಮಾರು 60 ಕೆಜಿಯಷ್ಟು ರೇಷ್ಮೆ ಗೂಡು ಕಳ್ಳತನವಾಗಿದೆ. ವಿದ್ಯುತ್ ಇಲ್ಲದಾಗ ಜನರೇಟರ್ ಬಳಸಲು ಅಳಿಗೆ ತಿಳಿಸಿ. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬ್ಯಾಂಕ್ ಇದ್ದಲ್ಲಿ ನಗದುರಹಿತ ವಹಿವಾಟಿಕೆ ಅನುಕೂಲಕರ ಹಾಗೂ ರೈತರು ಮತ್ತು ರೀಲರುಗಳಿಗೆ ಸಹಾಯಕ. ಮಾರುಕಟ್ಟೆಯ ಹೊರಗಡೆ ಸಾಲುಸಾಲಾಗಿ ಇಟ್ಟುಕೊಂಡಿರುವ ತೂಕದ ಯಂತ್ರಗಳಿಗೆ ಕಡಿವಾಣ ಹಾಕಿಸಿ ಎಂದು ಕೋರಿದರು.
ರೈತರು ಮತ್ತು ರೀಲರುಗಳ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರವೇ ಸಭೆಯೊಂದನ್ನು ಕರೆಯುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ರೇಷ್ಮೆ ನೂಲು ಬಿಚ್ಚಾಣಿಕಾ ಘಟಕ, ಬೋದಗೂರಿನ ಆಂಜನೇಯಸ್ವಾಮಿ ರೇಷ್ಮೆ ಬಿತ್ತನೆ ಕೇಂದ್ರ, ಹಿತ್ತಲಹಳ್ಳಿಯ ಹಿಪ್ಪುನೇರಳೆ ಸೊಪ್ಪಿನ ತೋಟ, ಹುಳು ಸಾಕಾಣಿಕಾ ಮನೆಗಳಿಗೆ ಭೇಟಿ ನೀಡಿ ರೇಷ್ಮೆ ಅವಲಂಬಿತರ ಕೆಲಸ ಕಾರ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಪಂಚಾಯ್ತಿ ರೇಷ್ಮೆ ಉಪನಿರ್ದೇಶಕ ನಾಗಭೂಷಣ್ ಹಾಜರಿದ್ದರು.
- Advertisement -
- Advertisement -
- Advertisement -