ತಾಲ್ಲೂಕಿನ ಗುಡಿಹಳ್ಳಿ ಗ್ರಾಮದ ಡಿ.ಎಸ್.ರಾಮರಾವ್ ಎಂಬುವರ ಮನೆಗೆ ಭಾನುವಾರ ಸಂಜೆ ದರೋಡೆಕೋರರಿಬ್ಬರು ನುಗ್ಗಿ ಮಚ್ಚಿನಲ್ಲಿ ಹಲ್ಲೆ ನಡೆಸಿ ಒಡವೆ ಹಾಗೂ ಹಣವನ್ನು ದೋಚಿರುವ ಘಟನೆ ನಡೆದಿದೆ.
ಮನೆಯಲ್ಲಿ ವೃದ್ಧರಾದ ಡಿ.ಎಸ್.ರಾಮರಾವ್ ಮತ್ತು ಅವರ ಪತ್ನಿ ಕಮಲಮ್ಮ ಇಬ್ಬರೇ ಇದ್ದ ವೇಳೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಬಂದಿದ್ದಾರೆ. ಬೈಕ್ ಮೇಲೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಕುಳಿತಿದ್ದು ಹಿಂಬದಿಯಲ್ಲಿ ಕುಳಿತಿದ್ದ ಯುವಕ ಬಂದು ಕಮಲಮ್ಮ ಅವರಿಗೆ ಕುಡಿಯಲು ನೀರು ಕೇಳಿದ್ದಾನೆ. ಮೂರು ಬಾರಿ ನೀರು ಕೇಳಿ ಕುಡಿದ ಯುವಕ ಸುಸ್ತಾಗುತ್ತಿದೆ ಸಕ್ಕರೆ ಕೊಡಿ ಅಂದಿದ್ದಾನೆ. ಒಳಗೆ ಹೋದ ಕಮಲಮ್ಮ ಅವರನ್ನು ಹಿಂಬಾಲಿಸಿ ಅವರ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚಿನಲ್ಲಿ ಹಲ್ಲೆ ನಡೆಸಿ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯದ ಸರ, ಓಲೆಯನ್ನು ಕಿತ್ತಕೊಂಡಿದ್ದಾನೆ. ಅಷ್ಟರಲ್ಲಿ ತಡೆಯಲು ಬಂದ ಡಿ.ಎಸ್.ರಾಮರಾವ್ ಅವರನ್ನು ತಳ್ಳಿ ಮಚ್ಚಿನಲ್ಲಿ ಹಲ್ಲೆ ಮಾಡಿದ್ದಾನೆ. ಹಿಂದಿನ ದಿನವಷ್ಟೆ ಡಿ.ಎಸ್.ರಾಮರಾವ್ ಅವರ ಮಗ ಶ್ರೀನಿಧಿ ಬೆಂಗಳೂರಿನಿಂದ ಬಂದು 50 ಸಾವಿರ ಹಣ ಮತ್ತು ಚಿನ್ನದ ಸರವನ್ನು ಕೊಟ್ಟು ಹೋಗಿದ್ದರಂತೆ. ಅದನ್ನೂ ದರೋಡೆಕೋರರು ಕೊಂಡೊಯ್ದಿದ್ದಾರೆ.
ಹಲ್ಲೆಗೊಳಗಾದ ಡಿ.ಎಸ್.ರಾಮರಾವ್ ಮತ್ತು ಅವರ ಪತ್ನಿ ಕಮಲಮ್ಮ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದು ತನಿಖೆ ನಡೆಸಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -