32.1 C
Sidlaghatta
Friday, March 29, 2024

ವ್ಯಕ್ತತ್ವ ರೂಪಿಸುವ ಶಿಕ್ಷಕರ ಪಾತ್ರ ಬಹುಮುಖ್ಯ

- Advertisement -
- Advertisement -

ಮನುಷ್ಯನನ್ನು ರೂಪಿಸುವುದೇ ಶಿಕ್ಷಣ. ಮುಗ್ಧ ಮಗುವನ್ನು ಪರಿಪೂರ್ಣ ವ್ಯಕ್ತತ್ವಗಳನ್ನಾಗಿಸುವ ಶಿಕ್ಷಕರ ಪಾತ್ರ ಬಹು ಮುಖ್ಯವಾದದ್ದು ಚಿಕ್ಕಬಳ್ಳಾಪುರ ವಾಪಸಂದ್ರದ ರಾಧಾಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದಸ್ವಾಮಿ ಆಶೀರ್ವಚನದಲ್ಲಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಸ್‌.ರಾಧಾಕೃಷ್ಣನ್‌ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ನಿರಂತರ ಅಧ್ಯಯನ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ಬೆಳಕನ್ನು ಹೊಸ ಹೊಳಹುಗಳನ್ನು ತೋರಿಸಬೇಕಾಗಿದೆ. ಕಲಿಯುತ್ತಾ ಕಲಿಸುತ್ತಾ ಸಾಗುವ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಗುರು ಎಂಬ ಉನ್ನತ ಸ್ಥಾನಕ್ಕೆ ಧಕ್ಕೆ ಬರದಂತೆ ಸಮಾಜ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ನೀಡಬೇಕೆಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಶಿಲೆಯನ್ನು ಕೆತ್ತಿ ಪೂಜನೀಯ ಶಿಲ್ಪವನ್ನಾಗಿಸುವ ಶಿಲ್ಪಿಯಂಥಹ ವ್ಯಕ್ತಿತ್ವ ರೂಪಿಸುವ ಪವಿತ್ರ ವೃತ್ತಿ ಶಿಕ್ಷಕರದ್ದು. ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಪೈಪೋಟಿ ಎದುರಿಸಬೇಕಾದರೆ ತಾವೂ ಹೊಸದನ್ನು ಕಲಿತು ಮಕ್ಕಳಿಗೂ ಕಲಿಸಬೇಕು. ಸಾಮರಸ್ಯ, ಸಾಮಾಜಿಕ ಕಳಕಳಿ, ಪರಿಸರಪ್ರೇಮ, ಉತ್ತಮ ಹವ್ಯಾಸಗಳನ್ನು ಮಕ್ಕಳಿಗೆ ಕಲಿಸಿ ಎಂದು ನುಡಿದರು.
ಶಿಕ್ಷಕರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಿವೃತ್ತರಾದ 22 ಮಂದಿ ಶಿಕ್ಷಕರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಕುಂದಲಗುರ್ಕಿ ಮೃದುಲಾ ಮತ್ತು ಮುತ್ತೂರು ಎ.ಶ್ರೀನಿವಾಸ್‌ ಅವರನ್ನು ಗೌರವಿಸಲಾಯಿತು.
ಶಿಕ್ಷಕ ನಾಗರಾಜ್‌ಶೆಟ್ಟಿ ಮಹಾಭಾರತದ ಒಂದು ದೃಶ್ಯವನ್ನು ವೇಷಭೂಷಣಗಳೊಂದಿಗೆ ಏಕಪಾತ್ರಾಭಿನಯ ಪ್ರದರ್ಶಿಸಿದರು. ಬಡ್ತಿ ನೀಡಬೇಕೆಂದು ಪ್ರೌಢಶಾಲಾ ಶಿಕ್ಷಕರು ಶಾಸಕ ಎಂ.ರಾಜಣ್ಣ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಹಶಿಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಜಿಲ್ಲಾ ಪಂಚಾಯತಿ ಸದಸ್ಯ ಎಸ್‌.ಎಂ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಸದಸ್ಯ ಡಿ.ಎಸ್‌.ಎನ್‌ ರಾಜು, ಕೋಚಿಮುಲ್‌ ನಿರ್ದೇಶಕ ಬಂಕ್‌ ಮುನಿಯಪ್ಪ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ರಾಮಚಂದ್ರಪ್ಪ, ಡಿ.ಸಿ.ಸಿ ಬ್ಯಾಂಕ್‌ ನಿರ್ದೇಶಕ ಶಿವಾರೆಡ್ಡಿ, ಜೆ.ಡಿ.ಎಸ್‌ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮುನಿವೆಂಕಟಸ್ವಾಮಿ, ದ್ಯಾವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರ್ಲಿ ಚಿತ್ರಕಲೆಯಿಂದ ಅಲಂಕೃತಗೊಂಡ ವೇದಿಕೆ
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಸ್‌.ರಾಧಾಕೃಷ್ಣನ್‌ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ವೇದಿಕೆಯ ಅಲಂಕಾರ ವಿಶಿಷ್ಟವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಜಾನಪದ ಲೊಕವನ್ನು ಪ್ರವೇಶಿಸುವಂತೆ ಶಿಡ್ಲಘಟ್ಟ ಮುಖ್ಯ ರಸ್ತೆಯಿಂದಲೇ ಬಿದಿರು ಹಾಗೂ ಬಣ್ಣದ ಬಟ್ಟೆಗಳನ್ನು ಬಳಸಿ ದಾರಿಯುದ್ದಕ್ಕೂ ಸಿಂಗರಿಸಲಾಗಿತ್ತು. ವರ್ಲಿ ಚಿತ್ರಕಲೆಯಿಂದ ವೇದಿಕೆಯ ಮುಂಭಾಗದಲ್ಲಿ ವಿವಿಧ ವಾದ್ಯಗಳು, ನೃತ್ಯ, ಶಾಲೆಗೆ ಹೋಗುವ ಬಾಲಕರನ್ನು ಚಿತ್ರಿಸಲಾಗಿತ್ತು. ಅಲ್ಲಲ್ಲಿ ಬಿಡಿಸಿದ್ದ ಬಣ್ಣಬಣ್ಣದ ರಂಗೋಲಿಗಳು, ಚಿತ್ತಾರಗಳಿರುವ ಮಡಕೆಗಳು, ಹೂಗಳು ಅಂದವನ್ನು ಹೆಚ್ಚಿಸಿದ್ದರೆ, ವೇದಿಕೆಯ ಮೇಲಿನ ಬ್ಯಾನರ್‌ ಗುರು ಮತ್ತು ಶಿಷ್ಯರ ಆರೋಗ್ಯಕರ ಸಂಬಂಧದ ಪ್ರತೀಕವಾಗಿ ರೂಪಿತವಾಗಿತ್ತು. ಸುತ್ತ ಶಿಕ್ಷಣಕ್ಕೆ ಸಂಬಂಧಿಸಿದ ಗಾಂಧೀಜಿ, ಐನ್‌ಸ್ಟೈನ್‌, ಅಬ್ದುಲ್‌ ಕಲಾಂ ಮುಂತಾದವರ ಶಿಕ್ಷಣಕ್ಕೆ ಸಂಬಂಧಿಸಿದ ಸೂಕ್ತಿಗಳು ಶಿಕ್ಷಣ ದಿನಾಚರಣೆಗೆ ಅನ್ವರ್ಥಕವಾಗಿದ್ದವು.
‘ಗುರು ಪಠ್ಯ ಪುಸ್ತಕಗಳ ಮಿತಿಯನ್ನು ಮೀರಿ ಶಿಕ್ಷಣವನ್ನು ನೀಡಬೇಕು ಎಂಬುದನ್ನು ಸಾರುವ ಉದ್ದೇಶದಿಂದ ಕ್ರಿಯಾಶೀಲವಾಗಿ ವೇದಿಕೆ ಹಾಗೂ ಕಾರ್ಯಕ್ರಮದ ಸ್ಥಳವನ್ನು ದೇಶೀ ಪದ್ಧತಿಯಲ್ಲಿ ಅಲಂಕರಿಸಿದೆವು. ಕನ್ನಮಂಗಲ, ತಾತಹಳ್ಳಿ ಮತ್ತು ಗುಡಿಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಕಲಾಧರ್‌, ನಾರಾಯಣಸ್ವಾಮಿ, ಬಾಲಚಂದ್ರ, ನಾಗರಾಜ್‌, ಟಿ.ಮಂಜುನಾಥ್‌ ಮತ್ತು ಸುರೇಶ್‌ ವೇದಿಕೆ ಹಾಗೂ ಕಾರ್ಯಕ್ರಮದ ಸಿಂಗಾರಕ್ಕೆ ಶ್ರಮಿಸಿದ್ದಾರೆ’ ಎಂದು ಶಿಕ್ಷಕ ದೇವರಾಜ್‌ ತಿಳಿಸಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!