ವಿದ್ಯೆಯು ಯಾರೂ ಅಪಹರಿಸಲಾಗದ ಅಮೂಲ್ಯವಾದ ಆಸ್ತಿ. ವಿದ್ಯೆಯು ಎಲ್ಲವನ್ನೂ ಸಂಪಾದಿಸಿಕೊಳ್ಳುವ ಶಕ್ತಿಯನ್ನು ವ್ಯಕ್ತಿಗೆ ನೀಡುತ್ತದೆ ಎಂದು ಪ್ರವಚನಕಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ತಿರುವನ್ನು ನೀಡುವ ಕಾಲಘಟ್ಟದಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಆಯ್ಕೆ ಮಾಡಿಕೊಂಡು ಏಕಾಗ್ರತೆಯಿಂದ ಸಾಧನೆ ಮಾಡಬೇಕು. ಗಿಡವು ಹೆಚ್ಚು ಬೇರುಬಿಟ್ಟಲ್ಲಿ ಹೆಚ್ಚು ಬಾಳುತ್ತದೆ. ಅದೇ ರೀತಿಯಾಗಿ ಈಗ ಓದುವ ಸಾಹಿತ್ಯ, ಪಠ್ಯ, ಕಲಿಕೆಗಳು ಜೀವನದಲ್ಲಿ ಸಹಕಾರಿಯಾಗುತ್ತವೆ. ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿಗೆ ಆನಂದ, ಉಲ್ಲಾಸ, ಕಲಾಸ್ವಾದನೆಯೊಂದಿಗೆ ಕ್ರಿಯಾಶೀಲತೆಯನ್ನೂ ಹೆಚ್ಚಿಸುತ್ತದೆ. ಉತ್ತಮ ಹವ್ಯಾಸಗಳು ನಿಮ್ಮ ಗುರಿ ಸಾಧನೆಗೂ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಾರದಾದೇವಿಯ ಪೂಜೆಯನ್ನೂ ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲ ಎನ್.ಆನಂದ್, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಜುಳಾ, ಉಪನ್ಯಾಸಕರಾದ ಶಿವಶಂಕರ್, ಶಿವಾರೆಡ್ಡಿ, ಮುನಿರಾಜು, ದೇವರಾಜು, ನಾಗಮಣಿ, ಸುಬ್ಬಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







