Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರು ಅಂತರಾಷ್ಟ್ರೀಯ ರೋಟರಿ ಜಿಲ್ಲಾ 3192 ನ ಪ್ರಸಕ್ತ ಸಾಲಿನ ಕಾರ್ಯಕಾರಿ ಮಂಡಳಿಯಲ್ಲಿ ಬೇಸಿಕ್ ಎಜುಕೇಶನ್ ಅಂಡ್ ಲಿಟರೆಸಿ ವಿಭಾಗದಲ್ಲಿ ಅಡಲ್ಟ್ ಲಿಟರೆಸಿ ಕಮಿಟಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸಾಕಷ್ಟು ಶೈಕ್ಷಣಿಕ ಸೇವೆ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು, ಕಳೆದ ರೋಟರಿ ವರ್ಷದಲ್ಲಿ ರೋಟರಿ ವಿಜಯಪುರ ಅಧ್ಯಕ್ಷರಾಗಿ ಸಾಕಷ್ಟು ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸಿದ್ದಾರೆ. ಶಾಲೆಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ, ವಾಶ್ ಇನ್ ಹ್ಯಾಂಡ್ಸ್ ಯೋಜನೆಯಡಿ ವಾಶ್ ಬೇಸಿನ್ಗಳ ನಿರ್ಮಾಣ, ನೈರ್ಮಲ್ಯ, ಶುದ್ಧಕುಡಿಯುವ ನೀರಿನ ಸೌಲಭ್ಯ ಒದಗಿಸಿರುವುದಲ್ಲದೇ ಗ್ರಾಮೀಣಭಾಗದ ಬಡ ವಿದ್ಯಾರ್ಥಿಗಳಿಗೆ ಲೇಖನಸಾಮಗ್ರಿಗಳನ್ನು ವಿತರಿಸಲಾಗಿದೆ. ಯುವಪೀಳಿಗೆಗೆ ಅಗತ್ಯ ತರಬೇತಿಗಳನ್ನು ನೀಡಿದ್ದು, ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಟಾನಗೊಳಿಸಿದ್ದಾರೆ. ಇದೀಗ ಈ ವರ್ಷದಲ್ಲಿ ಅಂತರಾಷ್ಟ್ರೀಯ ರೋಟರಿಯು ಶಿಕ್ಷಣ ಮತ್ತು ಸಾಕಷ್ಟರತಾ ಇಲಾಖೆಯ ಸಹಯೋಗದಲ್ಲಿ ಮೂಲಶಿಕ್ಷಣ, ವಯಸ್ಕರ ಶಿಕ್ಷಣಕ್ಕಾಗಿ ಜಾರಿಗೊಳಿಸುವ ಸಾಕಷ್ಟು ಯೋಜನೆಗಳನ್ನು ಅನುಷ್ಟಾನಗೊಳಿಸುವ ಉದ್ದೇಶದಿಂದ ಇರುವ ಕಮಿಟಿಯಲ್ಲಿ ಸದಸ್ಯಸ್ಥಾನ ಪಡೆದುಕೊಂಡಿದ್ದಾರೆ.