Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸೇವಂತಿಗೆ ಮತ್ತು ಗುಲಾಬಿ ಬೆಳೆಗಾರರ ತೋಟದಲ್ಲಿ, ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಂಟುಬಲೆಗಳ ಅಳವಡಿಕೆಯ ಮಹತ್ವವನ್ನು ತಿಳಿಸಿಕೊಡಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ಆರ್.ಪ್ರವೀಣಕುಮಾರ್ ಮಾಹಿತಿ ನೀಡಿ, ಅಂಟು ಬಲೆ, ಹೆಸರೇ ಸೂಚಿಸುವಂತೆ ಅಂಟನ್ನು ಸವರಿರುವ ಒಂದು ದಪ್ಪವಾದ ಕಾಗದದ ಹಾಳೆ. ಇದನ್ನು ಹೊಲದಲ್ಲಿ ಒಂದು ಕಟ್ಟಿಗೆಗೆ ತೂಗು ಹಾಕುತ್ತಾರೆ. ಹೊಲದಲ್ಲಿ ಹಾರಾಡುವ ಕೀಟಗಳು ಈ ಹಾಳೆಗೆ ಡಿಕ್ಕಿ ಹೊಡೆದರೆ ಸಾಕು. ಜಿಗುಟಾದ ಅಂಟಿಗೆ ಬಿಡಿಸಿಕೊಳ್ಳಲಾಗದಂತೆ ಸಿಕ್ಕಿಬೀಳುತ್ತವೆ.
ಸಾಮಾನ್ಯವಾಗಿ ಕೀಟಗಳು ಹೊಳಪು ಹಳದಿ ಹಾಗೂ ನೀಲಿ ಬಣ್ಣಗಳತ್ತ ಆಕರ್ಷಿಸಲ್ಪಡುತ್ತವೆ. ಆದ್ದರಿಂದ ಬಹುತೇಕ ಅಂಟುಬಲೆಗಳಿಗೆ ಇವೆರಡು ಬಣ್ಣಗಳಿವೆ. ವಿರಳವಾಗಿ ಕೆಂಪು ಬಣ್ಣದ ಅಂಟುಬಲೆಗಳನ್ನು ಕೂಡ ನೋಡಬಹುದು ಎಂದು ಹೇಳಿದರು.
ಬೇಸಾಯ ಶಾಸ್ತ್ರದ ವಿಜ್ಞಾನಿ ವಿಶ್ವನಾಥ ಮಾತನಾಡಿ, ಬಲೆಗಳಿಗೆ ಬಳಸುವ ಅಂಟು ವಿಷರಹಿತ. ಹೀಗಾಗಿ ರೈತರು, ಕುಟುಂಬದ ಮಹಿಳೆಯರು, ಮಕ್ಕಳು ಕೂಡ ಇವುಗಳನ್ನು ಹೊಲ-ತೋಟಗಳಲ್ಲಿ ಯಾವುದೇ ಬಗೆಯ ಆತಂಕವಿಲ್ಲದೆ ಜೋಡಿಸಬಹುದು. ಇವುಗಳಲ್ಲಿ ರಾಸಾಯನಿಕ ಇಲ್ಲದೇ ಇರುವುದರಿಂದ ಪರಿಸರ ಸ್ನೇಹಿಯೂ ಹೌದು ಎಂದು ತಿಳಿಸಿದರು.
ಮಣ್ಣು ವಿಜ್ಞಾನಿ ಡಾ. ಸಂಧ್ಯಾ ಮಾತನಾಡಿ, ಬಲೆಗೆ ಬೀಳುವ ಕೀಟ ಸಾಮಾನ್ಯವಾಗಿ ಹಾರಬಲ್ಲ ಕೀಟಗಳು. ಇಂಥ ಕೀಟಗಳು ಅಂಟುಬಲೆಗಳಿಗೆ ಡಿಕ್ಕಿ ಹೊಡೆದು ಸಿಕ್ಕಿ ಹಾಕಿಕೊಳ್ಳುತ್ತವೆ. ಬೆಳೆಗಳನ್ನು ಬಹುವಾಗಿ ಕಾಡುವ ಬಿಳಿ ನೊಣ, ಅಫಿಡ್ ಹೇನು, ಪತಂಗ, ಎಲೆ ಸುರಂಗ ಹುಳ, ಎಲೆ ತಿನ್ನುವ ಹುಳ, ಥ್ರಿಪ್ಸ್ ನುಸಿ, ದುಂಬಿ ಮುಂತಾದ ಬಗೆಯ ಕೀಟಗಳು ಸುಲಭವಾಗಿ ಅಂಟುಬಲೆಗೆ ಶಿಕಾರಿಗಳಾಗುತ್ತವೆ ಎಂದು ಮಾಹಿತಿ ನೀಡಿದರು.
ಪ್ರಗತಿಪರ ರೈತರಾದ ಎ.ಎಂ.ತ್ಯಾಗರಾಜ್, ಮುನೇಂದ್ರ, ಹರೀಶ್ ಸೇರಿದಂತೆ ಸುಮಾರು 30 ಜನ ರೈತರು ಹಾಜರಿದ್ದರು.