Sidlaghatta : ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮುಂದಿನ ತಿಂಗಳು ಜುಲೈ 9 ರಂದು ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆವಿ ಭವನದಲ್ಲಿ ನಡೆಯುತ್ತಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಅಂಗನವಾಡಿ ನೌಕರರಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ 50 ವರ್ಷಗಳಾಗಿವೆ. ಐಸಿಡಿಎಸ್ ಯೋಜನೆಯನ್ನು ಖಾಯಂಗೊಳಿಸಬೇಕು, ಐಸಿಡಿಎಸ್ ಯೋಜನೆಗೆ ಮೀಸಲಿಡುವ ಅನುದಾನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಅಂಗನವಾಗಿ ಶಿಕ್ಷಕರು, ಸಹಾಯಕರನ್ನು ಖಾಯಂಗೊಳಿಸಬೇಕು, ಅದುವರೆಗೂ 26 ಸಾವಿರ ರೂ.ಕನಿಷ್ಠ ವೇತನ ನೀಡಬೇಕು ಮತ್ತು ನಿವೃತ್ತಿ ನಂತರ 10 ಸಾವಿರ ರೂ,ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಇದೀಗ ಹೊಸದಾಗಿ ಟಿ.ಎಚ್.ಆರ್ ಮೂಲಕ ಫಲಾನುಭವಿಗಳ ಫೋಷಣ್ ಟ್ರ್ಯಾಕರ್ ಕೆಲಸಗಳಿಗೆ ಅಪ್ ಡೇಟೆಡ್ ಮೊಬೈಲ್ ಹ್ಯಾಂಡ್ ಸೆಟ್ ವಿತರಿಸಬೇಕು, ನೆಟ್ ಗಾಗಿ ವಾರ್ಷಿಕವಾಗಿ ನೀಡುತ್ತಿರುವ 2 ಸಾವಿರ ರೂಗಳನ್ನು ಇನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ತಿಂಗಳೂ ಮಗುವಿನ ಫೋಟೋವನ್ನು ಅಪ್ ಡೇಟ್ ಮಾಡುವ ಕೆಲಸವನ್ನು ಪ್ರತಿ ತಿಂಗಳ ಬದಲಿಗೆ ಮೂರು ತಿಂಗಳಿಗೊಮ್ಮೆ ಫೋಟೋ ಅಪ್ ಡೇಟ್ ಮಾಡಲು ಅವಕಾಶ ನೀಡಬೇಕು ಎಂದರು.
ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ನೌಕರರು ಸಂಘಗಳನ್ನು ರಚಿಸುವ, ಸಂಘಟಿಸುವ ಮತ್ತು ಮುಷ್ಕರ, ಪ್ರತಿಭಟನೆ ನಡೆಸುವ ಹಕ್ಕುಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದ್ದು ತಿದ್ದುಪಡಿ ಮಾಡುವ ಕೆಲಸವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಹಾಗೆಯೆ 2023 ಏಪ್ರಿಲ್ 1 ರಂದು 1972 ರ ಗ್ರಾಜ್ಯುಟಿ ಪಾವತಿ ಕಾಯಿದೆಗೆ ತಿದ್ದುಪಡಿ ತಂದು 287 ಕಾರ್ಯಕರ್ತೆಯರು, 1204 ಸಹಾಯಕಿಯರಿಗೆ ಗ್ರಾಜ್ಯುಟಿ ಪಾವತಿಸಿದ್ದು ಅದೇ ರೀತಿ 2011 ರಿಂದ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೂ ಇದರ ಅನ್ವಯ ಗ್ರಾಜ್ಯುಟಿ ನೀಡಬೇಕೆಂದು ಮನವಿ ಮಾಡಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈಡೇರಿಸುವಂತೆ ಒತ್ತಾಯಿಸಿ ಜುಲೈ 9 ರಂದು ರಾಜ್ಯದ ಎಲ್ಲ ಅಂಗನವಾಗಿ ಕೇಂದ್ರಗಳನ್ನು ಮುಚ್ಚಿ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ಕಾರ್ಯದರ್ಶಿ ಕೆ.ರತ್ನ, ಕೋಲಾರ ಜಿಲ್ಲಾಧ್ಯಕ್ಷೆ ಕಲ್ಪನ, ಕಾರ್ಯದರ್ಶಿ ಆಂಜಿನಮ್ಮ ಹಾಜರಿದ್ದರು.