ಅಗ್ನಿಶಾಮಕ ಠಾಣೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಏನೇನು ಕಾಮಗಾರಿಗಳನ್ನು ಮಾಡಿಸಬಹುದೋ ಅವೆಲ್ಲಾ ಕಾಮಗಾರಿಗಳನ್ನು ಗ್ರಾಮಪಂಚಾಯಿತಿ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ನರೇಗಾ ಯೋಜನೆ ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ಆನೂರು ಗೇಟ್ ಬಳಿ ಇರುವ ಅಗ್ನಿಶಾಮಕ ಠಾಣೆಗೆ ಆನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ಜೊತೆಯಲ್ಲಿ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ಅಗ್ನಿಶಾಮಕ ಠಾಣೆ ಸರ್ಕಾರಿ ಕಟ್ಟಡದ ಆವರಣದಲ್ಲಿ ಪೌಷ್ಠಿಕ ಕೈ ತೋಟ ಕಾಮಗಾರಿಯನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರಾರಂಭ ಮಾಡಿದ್ದೇವೆ. ಪೌಷ್ಠಿಕ ಕೈ ತೋಟದಲ್ಲಿ ನಿಂಬೆ, ಸೀಬೆ, ಸಪೋಟ, ಬಾಳೆ, ಕರಿಬೇವು ಹಾಗೂ ಇನ್ನಿತರೆ ಆರೋಗ್ಯಕ್ಕೆ ಅನುಕೂಲವಾದ ಎಲ್ಲಾ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ ಎಂದರು.
ಅಗ್ನಿಶಾಮಕ ಠಾಣೆ ಕಟ್ಟಡಕ್ಕೆ ಮಳೆ ನೀರು ಕೊಯ್ಲು ಕಾಮಗಾರಿಯನ್ನು ಪ್ರಾರಂಭ ಮಾಡಿದ್ದೇವೆ. ಅಗ್ನಿಶಾಮಕ ಠಾಣೆ ಕ್ವಾಟರ್ಸ್ ಗಳ ಬಳಿ ಲಭ್ಯವಿರುವ ಸ್ಥಳದಲ್ಲಿ ಉದ್ಯಾನವನವನ್ನು ಗ್ರಾಮಪಂಚಾಯಿತಿಯವರು ರೂಪಿಸಲಿದ್ದಾರೆ. ಇಲ್ಲಿ ನೀರಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ. ದಿನನಿತ್ಯದ ಬಳಕೆಗೆ ಅವಶ್ಯಕ ನೀರು ಒದಗಿಸಿಕೊಡಲು ಗ್ರಾಮಪಂಚಾಯಿತಿ ಸಿದ್ಧವಿದೆ. ಪೈಪ್ ಲೈನ್ ಮುಖಾಂತರ ನೀರು ನೀಡಲಾಗುತ್ತದೆ ಎಂದರು.
ಅಗ್ನಿಶಾಮಕ ಠಾಣಾಧಿಕಾರಿ ಕೆ.ಆರ್.ರಾಮಕೃಷ್ಣಪ್ಪ, ಪ್ರಮುಖ ಅಗ್ನಿಶಾಮಕ ಠಾಣಾಧಿಕಾರಿಗಳಾದ ಶ್ರೀನಿವಾಸ್, ಕಿರಣ್, ಹಾಗೂ ಅಶೋಕ್ ಹಾಜರಿದ್ದರು.