Bhaktarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರ ಸೇವಾ ದಳದ 8 ದಿನಗಳ ವಸತಿ ಶಿಬಿರದ ಸಮಾರೋಪ ಸಮಾರಂಭವು ಅತ್ಯಂತ ಹೃದಯಂಗಮ ಮತ್ತು ಭಾವನಾತ್ಮಕತೆಯಿಂದ ಕೂಡಿತ್ತು.
ಶುಕ್ರವಾರ ನಡೆದ ಸಮಾರೋಪ ಸಮಾರಂಭಕ್ಕೆ ಮುನ್ನ 80 ಜನ ಶಿಬಿರಾರ್ಥಿಗಳು ಬಸವಾಪಟ್ಟಣದ ವೃತ್ತದಲ್ಲಿ ತಾವುಗಳು ಎಂಟು ದಿನಗಳಿಂದ ಕಲಿತ ಕವಾಯತ್ತಿನ ಪ್ರದರ್ಶನವನ್ನು ನೀಡಿದರು. ನಂತರ ಬಿ.ಎಂ.ವಿ. ವಿದ್ಯಾಸಂಸ್ಥೆಯ ಆವರಣದಲ್ಲಿ ಸಹ ಅವರು ಆಗಮಿಸಿದ್ದ ಅತಿಥಿಗಳ ಮುಂದೆ ಒಂದು ವಾರ ಕಲಿತ ವಿವಿಧ ಕಲಿಕೆಗಳ ಪ್ರದರ್ಶನ ನೀಡಿದರು.
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರ ಸೇವಾ ದಳದ 8 ದಿನಗಳ ವಸತಿ ಶಿಬಿರದಲ್ಲಿ ಈ ಹಿಂದೆ ಭಾಗವಹಿಸಿದ್ದು, ಈಗ ಹಿರಿಯರಾಗಿ ಬದುಕನ್ನು ಕಟ್ಟಿಕೊಂಡಿರುವ ಹಿರಿಯ ಶಾಲಾ ವಿದ್ಯಾರ್ಥಿಗಳು ಆಗಮಿಸಿ, ತರಬೇತುದಾರರಾದ ಕ್ಯಾಂಪ್ ತರಬೇತುದಾರರಾದ ಬಾಬಾ ಸಾಹೇಬ್ ನಡಾಫ್, ಚಂದನ್ ಮಾತುಂಗೆ, ಸಾಗರ್ ಪಾಟೀಲ್, ಬಿಷ್ಣ ತಾಪ, ಪ್ರೊ.ಹನುಮಂತು ಅವರುಗಳನ್ನು ಭೇಟಿಯಾಗಿ ಉಡುಗೊರೆಗಳನ್ನು ನೀಡಿ ಸತ್ಕರಿಸಿದ ದೃಶ್ಯ ಭಾವನಾತ್ಮಕವಾಗಿತ್ತು.
ಶಿಬಿರದ ರೂವಾರಿ ಮತ್ತು ಬಿ.ಎಂ.ವಿ.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ರಾಷ್ಟ್ರ ಸೇವಾ ದಳದ ಶಿಬಿರ ಕೇವಲ ದೈಹಿಕ ಶಿಸ್ತಿನ ಕೇಂದ್ರಗಳಲ್ಲ, ಅವು ಸಮಾಜವಾದಿ ಸಿದ್ಧಾಂತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯೋಗಶಾಲೆಗಳಿದ್ದಂತೆ. ಸಮಾನತೆಯ ಅಭ್ಯಾಸ, ಶ್ರಮ ಗೌರವ ,ವೈಜ್ಞಾನಿಕ ಮನೋಭಾವ ಮತ್ತು ಜಾತ್ಯತೀತತೆ, ಸಮೂಹ ಜೀವನ ಮತ್ತು ಸಹಕಾರ, ಸಾಮಾಜಿಕ ನ್ಯಾಯದ ಅರಿವು ಕಲಿತ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುತ್ತಾರೆ. ಒಟ್ಟಾರೆಯಾಗಿ, ರಾಷ್ಟ್ರ ಸೇವಾ ದಳದ ಶಿಬಿರ ಒಬ್ಬ ವ್ಯಕ್ತಿಯನ್ನು ಕೇವಲ ಒಳ್ಳೆಯ ಪ್ರಜೆಯನ್ನಾಗಿ ಮಾಡುವುದಷ್ಟೇ ಅಲ್ಲದೆ, ಸಮಾಜಮುಖಿ ಚಿಂತಕನನ್ನಾಗಿ ರೂಪಿಸುವಲ್ಲಿ ಸಮಾಜವಾದಿ ತತ್ವಗಳನ್ನು ಅಡಿಪಾಯವಾಗಿ ಬಳಸಿಕೊಳ್ಳುತ್ತವೆ ಎಂದು ಹೇಳಿದರು.
ಬಿ.ಎಂ.ವಿ. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್.ಕಾಳಪ್ಪ, ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರ ಶೆಟ್ಟಿ, ಪ್ರೊ.ಹನುಮಂತ, ಜಿ.ವಿ.ಸುಂದರ್, ತೋಟಗಾರಿಕಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಸಂತೆ ನಾರಾಯಣಸ್ವಾಮಿ, ರಾಷ್ಟ್ರಸೇವಾದಳದ ರಾಜ್ಯ ಅಧ್ಯಕ್ಷ ಶಂಕರ್ ಅಳಗಟ್ಟಿ, ಕೊಲ್ಲಾಪುರದ ರಾಹುಸಾಹೇಬ್ ಅಲಾಸ್, ಚಿದಾನಂದಮೂರ್ತಿ, ಬಿ.ಕೆ.ರಾಮಚಂದ್ರ, ಎಸ್.ನಂಜುಂಡಾರಾಧ್ಯ, ಹೇಮಂತ್ ಕುಮಾರ್, ದೇವರಾಜ್, ಪ್ರಶಾಂತ್ ಕುಮಾರ್, ಎನ್.ಎಸ್.ವೆಂಕಟೇಶ್, ಬಿ.ಸಿ.ಜಯಚಂದ್ರ, ಕ್ಯಾಂಪ್ ತರಬೇತುದಾರರಾದ ಬಾಬಾ ಸಾಹೇಬ್ ನಡಾಫ್, ಚಂದನ್ ಮಾತುಂಗೆ, ಸಾಗರ್ ಪಾಟೀಲ್, ಬಿಷ್ಣ ತಾಪ ಹಾಗೂ ಪೋಷಕರು, ಶಿಬಿರಾರ್ಥಿಗಳು ಹಾಜರಿದ್ದರು.








