Bhaktarahalli, Sidlaghatta : ಮಕ್ಕಳ ಭೌದ್ಧಿಕ ವಿಕಸನಕ್ಕೆ ನೆರವಾಗಲೆಂದು ಭಕ್ತರಹಳ್ಳಿಯ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರ ಸೇವಾ ದಳದ 8 ದಿನಗಳ ವಸತಿ ಶಿಬಿರವನ್ನು ಏಪ್ರಿಲ್ 3 ರಿಂದ 10ರವರೆಗೂ ಯೋಜಿಸಿದ್ದೇವೆ ಎಂದು ಬಿ.ಎಂ.ವಿ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರೌಢಶಾಲಾ ಮಕ್ಕಳಿಗೆ ಕಿರಿಯ ವಯಸ್ಸಿನಲ್ಲಿಯೇ ಸಮಾಜವಾದದ ಮೂಲ ಪರಿಕಲ್ಪನೆಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರಭಾವಗಳ ಜೊತೆಗೆ ರಾಷ್ಟ್ರೀಯತೆ ಮತ್ತು ವೈಜ್ಞಾನಿಕ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಶಿಬಿರವನ್ನು ನಡೆಸುತ್ತಿದ್ದೇವೆ. ರಾಷ್ಟ್ರ ಸೇವಾ ದಳವು ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸಮಾಜವಾದ, ಸಮಾನತೆ, ಜಾತ್ಯಾತೀತ ಹಾಗೂ ಸಹೋದರಭಾವ ತತ್ವವನ್ನು ಹೊಂದಿದೆ ಎಂದರು.
ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಅಪ್ಪಟ ಸಮಾಜವಾದಿ ಹಾಗೂ ಗಾಂಧಿವಾದಿ ಬಿ.ಆರ್.ಪಾಟೀಲ್ ಅವರು ಈ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಎಂಟೂ ದಿನಗಳ ಶಿಬಿರದಲ್ಲಿ ನಾಡೀನ ಅತ್ಯುತ್ತಮ ಭಾಷಣಕಾರರು ಆಗಮಿಸಲಿದ್ದು, ವಿಜ್ಞಾನ, ತಂತ್ರಜ್ಞಾನ, ಕೃಷಿ, ಸಮಾನತೆ, ಭಾರತದ ಜನತಂತ್ರ ವ್ಯವಸ್ಥೆ ಮತ್ತು ಸಂವಿಧಾನ ಮುಂತಾದ ವಿಚಾರಗಳ ಬಗ್ಗೆ ಮಕ್ಕಳಿಗೆ ಅರ್ಥವಾಗುವ ಹಾಗೆ ವಿವರಿಸಲಿದ್ದಾರೆ. ಪಠ್ಯದಲ್ಲಿಲ್ಲದ ಅನೇಕ ಅತ್ಯವಶ್ಯಕ ವಿಚಾರಗಳನ್ನು ಮಕ್ಕಳು ಕಲಿಯಲಿದ್ದಾರೆ ಎಂದರು.
ಬಿ.ಎಂ.ವಿ. ವಿದ್ಯಾಸಂಸ್ಥೆಯ ಟ್ರಸ್ಟಿ ಸಂತೆ ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡುತ್ತಿರುವುದರ ಜೊತೆಗೆ, ವರ್ಷಕ್ಕೊಮ್ಮೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ, ಜೀವನಾವಶ್ಯಕ ಮಾರ್ಗದರ್ಶಿ ಶಿಬಿರವನ್ನು ಸಹ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.








