ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಚರಕವನ್ನು ಬಳಸಿ ಹತ್ತಿಯಿಂದ ನೂಲನ್ನು ತಯಾರಿಸುವ ಮೂಲಕ ಶಿಕ್ಷಕರು ಗಾಂಧೀಜಿ ತತ್ವವನ್ನು, ಸ್ವಾತಂತ್ರ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಅಗ್ರಗಣ್ಯ ಮೈಲಾರ ಮಹಾದೇವನ ಆದರ್ಶವನ್ನು ಹಾಗೂ ವಿಜ್ಞಾನದ ಪಾಠವನ್ನು ಮಾಡಿದರು.
“ಆರು, ಏಳು ಮತ್ತು ಎಂಟನೇ ತರಗತಿಯ ವಿಜ್ಞಾನದಲ್ಲಿ “ಎಳೆಯಿಂದ ಬಟ್ಟೆ” ಎಂಬ ಪಾಠವಿದೆ. ಗಾಂಧೀಜಿಯವರ ಕರ್ಮಭೂಮಿಯಾಗಿದ್ದ ಸಬರಮತಿ ಆಶ್ರಮಕ್ಕೆ ಹೋಗಿದ್ದಾಗ ಪುಟ್ಟ ಚರಕವನ್ನು ತಂದಿದ್ದೆ. ಚರಕದಲ್ಲಿ ಯಾವರೀತಿ ಹತ್ತಿಯಿಂದ ನೂಲನ್ನು ತೆಗೆಯುತ್ತಿದ್ದರು ಎಂದು ಈ ದಿನ ವಿದ್ಯಾರ್ಥಿಗಳಿಗೆ ತೋರಿಸಿದೆ. ನೈಸರ್ಗಿಕ ಎಳೆಗಳು, ಎಳೆಯಿಂದ ಬಟ್ಟೆ, ಸಂಶ್ಲೇಷಿತ ಎಳೆಗಳು ಮುಂತಾದ ಸಂಗತಿಗಳು ವಿದ್ಯಾರ್ಥಿಗಳಿಗೆ ಪಠ್ಯದಲ್ಲಿವೆ. ಪ್ರಾಯೋಗಿಕವಾಗಿ ತೋರಿಸಿದಾಗ ಮಕ್ಕಳು ಮರೆಯುವುದಿಲ್ಲ. ಪಾಠವನ್ನು ಚೆನ್ನಾಗಿ ಅರ್ಥೈಸಿಕೊಳ್ಳುವರು” ಎಂದು ಶಿಕ್ಷಕ ಎಂ.ಎ.ರಾಮಕೃಷ್ಣ ತಿಳಿಸಿದರು.
“ಏಳನೇ ತರಗತಿಯಕನ್ನಡ ಪಠ್ಯದಲ್ಲಿ “ಮೈಲಾರ ಮಹಾದೇವ” ಎಂಬ ಪಾಠವಿದೆ. ಗಾಂಧೀಜಿಯವರ ದಂಡಿ ಯಾತ್ರೆಯ ಸಲುವಾಗಿ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಸಬರಮತಿ ಆಶ್ರಮಕ್ಕೆ ಹೋಗಿ 79 ಜನರೊಟ್ಟಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮೈಲಾರ ಮಹಾದೇವ,ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿದ್ದಾಗ, ಅವನ ತಾಯಿ ಬಸಮ್ಮ ಸ್ವತಃ ನೇಯ್ದ ಬಟ್ಟೆಯನ್ನು ಹರಿಜನ ನಿಧಿ ಕಾಣಿಕೆ ಎಂದು ಗಾಂಧೀಜಿಯವರಿಗೆ ಅರ್ಪಿಸಿದ್ದಳು. ರೆಡಿಮೇಡ್ ಬಟ್ಟೆ ಧರಿಸುವ ಈಗಿನ ಮಕ್ಕಳಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಚರಕವನ್ನು ಅಸ್ತ್ರದಂತೆ ಬಳಸಿದ ಹೋರಾಟಗಾರರ ಕೆಚ್ಚು, ಸ್ವದೇಶಿ ಖಾದಿ ತಯಾರಿಕಾ ವಿಧಾನದ ಬಗ್ಗೆ ತಿಳಿಹೇಳಲಾಯಿತು” ಎಂದು ಅವರು ವಿವರಿಸಿದರು.