Sidlaghatta : ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಅಪೌಷ್ಟಿಕತೆಯ ಪಾಲು ದೊಡ್ಡದು. ಈ ನ್ಯೂನತೆ ನಿವಾರಣೆಗೆ ಹಲವು ಯೋಜನೆಗಳು ರೂಪುಗೊಂಡಿವೆ. ಈ ನಿಟ್ಟಿನಲ್ಲಿ ವಿವಿಧ ಸೇವಾ ಸಂಸ್ಥೆಗಳು ಕೂಡ ಕೈಜೋಡಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ನವತಾಜ್ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ಶ್ರೀ ಸತ್ಯಸಾಯಿ ಅನ್ನಪೂರ್ಣ ಸೇವಾ ಟ್ರಸ್ಟ್ ವತಿಯಿಂದ ತಾಲ್ಲೂಕಿನ 500 ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ಹಾಗೂ 11 ತೀವ್ರ ಅಪೌಷ್ಟಿಕ ಮಕ್ಕಳಿಗೆ ತಲಾ ಒಂದು ಕೇಜಿ ಸಾಯಿಶ್ಯೂರ್ ಚಾಕೊಲೇಟ್ ಮಾಲ್ಟ್ ಪೌಡರ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪೌಷ್ಟಿಕ ಮಕ್ಕಳಿಗೆ ವಿಶೇಷ ಆರೈಕೆಯ ಅಗತ್ಯವಿದೆ. ಅವರು ಕನಿಷ್ಠ 14 ದಿನಗಳ ಚಿಕಿತ್ಸೆಯನ್ನು ಪಡೆಯಲೇಬೇಕು. ಇದಕ್ಕೋಸ್ಕರವಾಗಿಯೇ ಪೋಷಕರಿಗೆ ಈ ಅವಧಿಯಲ್ಲಿ ನಿತ್ಯ ಭತ್ಯೆ ಕೂಡ ನೀಡಲಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇದರ ಪ್ರಯೋಜನ ಸಿಗಬೇಕು. ಪೋಷಕರೂ ಇದಕ್ಕೆ ಪೂರ್ಣ ಸಹಕಾರ ನೀಡಬೇಕು. ವೈದ್ಯರು ನೀಡುವ ಸಲಹೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಅಪೌಷ್ಟಿಕತೆಯ ನಿವಾರಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಗರ್ಭಿಣಿ ಮಳೆಯರಿಗೆ ತಾಯಿ ಕಾರ್ಡ್, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಆಹಾರ ವಿತರಣೆ, ಹೆಚ್ಚಿನ ಚಿಕಿತ್ಸೆಗಾಗಿ ಬಾಲ ಸಂಜೀನಿ ಯೋಜನೆ, ಆಸ್ಪತ್ರೆಯ ಎನ್.ಆರ್.ಸಿ ಕೇಂದ್ರದಲ್ಲಿ ಚಿಕಿತ್ಸಾ ಸೌಲಭ್ಯ ಸೇರಿದಂತೆ ಹಲವು ಅತ್ಯಂತ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ದೇವರಾಜ್, ಶ್ರೀ ಸಾಯಿ ಅನ್ನಪೂರ್ಣ ಸೇವಾ ಟ್ರಸ್ಟ್ ರಾಜ್ಯ ವ್ಯವಸ್ಥಾಪಕ ಕಿರಣ್, ಪ್ರಾಂತೀಯ ವ್ಯವಸ್ಥಾಪಕ ರಾಜೀವ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕರು, ಸಿಬ್ಬಂದಿ ಮತ್ತು ಪೋಷಕರು ಹಾಜರಿದ್ದರು.