Sidlaghatta : ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ (ಚಿಮುಲ್) ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಿಂದ ಬಂಕ್ ಮುನಿಯಪ್ಪ ಹಾಗೂ ಜಂಗಮಕೋಟೆ ಕ್ಷೇತ್ರದಿಂದ ಹುಜಗೂರು ರಾಮಯ್ಯ ಗೆದ್ದು ಬೀಗಿದ್ದಾರೆ.
ಕಾಂಗ್ರೆಸ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಆರ್. ಶ್ರೀನಿವಾಸ್ ಮತ್ತು ಚೊಕ್ಕೇಗೌಡ ಅವರು ಸೋಲು ಅನುಭವಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಬಣಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ.
ಮತಗಳ ವಿವರ:
ಶಿಡ್ಲಘಟ್ಟ ಕ್ಷೇತ್ರ: ಇಲ್ಲಿ ಒಟ್ಟು 80 ಮತಗಳು ಚಲಾವಣೆಯಾಗಿದ್ದು, 1 ಮತ ಕುಲಗೆಟ್ಟಿತ್ತು. ಜೆಡಿಎಸ್ ಬೆಂಬಲಿತ ಬಂಕ್ ಮುನಿಯಪ್ಪ 56 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಚೊಕ್ಕೇಗೌಡ ಕೇವಲ 23 ಮತಗಳನ್ನು ಪಡೆದರು.
ಜಂಗಮಕೋಟೆ ಕ್ಷೇತ್ರ: ಇಲ್ಲಿ ಚಲಾವಣೆಯಾದ 81 ಮತಗಳಲ್ಲಿ 1 ಮತ ಕುಲಗೆಟ್ಟಿತ್ತು. ಹುಜಗೂರು ರಾಮಯ್ಯ 49 ಮತಗಳನ್ನು ಪಡೆದು ವಿಜಯಿಯಾದರೆ, ಕಾಂಗ್ರೆಸ್ ಬೆಂಬಲಿತ ಆರ್. ಶ್ರೀನಿವಾಸ್ 31 ಮತಗಳನ್ನು ಪಡೆದು ಪರಾಭವಗೊಂಡರು.
ಅನುಭವ vs ಹೊಸ ಮುಖ:
ಬಂಕ್ ಮುನಿಯಪ್ಪ ಅವರು ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದು ಯಶಸ್ವಿಯಾದರೆ, ಮೊದಲ ಪ್ರಯತ್ನದಲ್ಲೇ ಹುಜಗೂರು ರಾಮಯ್ಯ ಅವರು ಜಯಭೇರಿ ಬಾರಿಸಿದ್ದಾರೆ. ಇನ್ನು ಮಾಜಿ ನಿರ್ದೇಶಕ ಆರ್. ಶ್ರೀನಿವಾಸ್ ಅವರಿಗೆ ಈ ಬಾರಿ ಮತದಾರರು ಕೈಹಿಡಿಯಲಿಲ್ಲ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.








