Malamachanahalli, Sidlaghatta : CHIMUL ನಿರ್ದೇಶಕರಾದ ಜಂಗಮಕೋಟೆ ಕ್ಷೇತ್ರದ ಹುಜಗೂರು ರಾಮಣ್ಣ ಹಾಗೂ ಶಿಡ್ಲಘಟ್ಟ ಕ್ಷೇತ್ರದ ಬಂಕ್ ಮುನಿಯಪ್ಪ ಅವರು ಮಳಮಾಚನಹಳ್ಳಿ ಗ್ರಾಮದ ದೇವಾಲಯಗಳ ಅಭಿವೃದ್ಧಿಗೆ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಚಂದ್ರ ಮೌಳೇಶ್ವರ ಸ್ವಾಮಿ ಹಾಗೂ ಬ್ಯಾಟರಾಯ ಸ್ವಾಮಿಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಬ್ಯಾಟರಾಯಸ್ವಾಮಿ, ಗಂಗಮ್ಮ , ಸಪ್ಪಲಮ್ಮ, ಕುಂಬೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಗ್ರಾಮದ ಎಲ್ಲಾ ದೇವಾಲಯಗಳ ಅಭಿವೃದ್ಧಿಗೆ ಹಣವನ್ನು ಬಳಸಿಕೊಳ್ಳುವಂತೆ ಅವರು ಕೋರಿದರು.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಹಾಲು ಸರಬರಾಜು ಮಾಡುವ ಹಾಲಿನ ಡೈರಿ ಎಂಬ ಹೆಗ್ಗಳಿಕೆ ಪಡೆದಿರುವ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ ಸಂಘದ ಕಾರ್ಯ ವೈಖರಿ, ಸ್ವಚತೆಯನ್ನು ಗಮನಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕರಾದ ಹುಜಗೂರು ರಾಮಣ್ಣ ಮತ್ತು ಬಂಕ್ ಮುನಿಯಪ್ಪ ಮಾತನಾಡಿ, ಅವಿಭಾಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮ ಗುಣ ಮಟ್ಟದೊಂದಿಗೆ ಹೆಚ್ಚಿನ ಹಾಲು ಸರಬರಾಜು ಮಾಡುವ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ಒಕ್ಕೂಟದಿಂದ ಸಿಗುವಂತಹ ಸೌಲಭ್ಯಗಳನ್ನು ಈ ಸಂಘಕ್ಕೆ ತಲುಪಿಸಲು ಮೊದಲ ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಈದೇ ಸಂಧರ್ಭದಲ್ಲಿ ಪದವೀಧರ ವಿದ್ಯಾರ್ಥಿಗಳಾದ ನವ್ಯಶ್ರೀ ಹಾಗೂ ಲಿಖಿತ್ ರವರಿಗೆ ಸಹಕಾರ ಸಂಘದಲ್ಲಿ ತರಬೇತಿ ಪಡೆದಿರುವ ಇಂಟರ್ನ್ ಶಿಪ್ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಗ್ರಾಮದ ಜೆಡಿಎಸ್ ಮುಖಂಡರು ಹಾಗೂ ಡೈರಿ ಸಿಬ್ಬಂದಿ ಚಿಮುಲ್ ನ ನಿರ್ದೇಶಕರನ್ನು ಗೌರವಿಸಲಾಯಿತು.
ಗ್ರಾಮದ ಹಿರಿಯ ಮುಖಂಡ ಎಂ.ಸಿ.ಜಗದೀಶಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಕೆ. ರಾಜಶೇಖರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದ್ಯಾವಪ್ಪ, ಮಾಜಿ ಅಧ್ಯಕ್ಷರಾದ ಸತೀಶ್, ರಾಮಚಂದ್ರಚಾರಿ, ಚಿಮುಲ್ ಶಿಡ್ಲಘಟ್ಟ ಶಿಬಿರದ ಉಪ ವ್ಯವಸ್ಥಾಕ ಡಾ. ಬಿ.ಆರ್. ರವಿ ಕಿರಣ್, ವಿಸ್ತರಣಾಧಿಕಾರಿ ಶ್ರೀನಿವಾಸ್ , ಡೈರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ವಿನಯ್ ಕುಮಾರ್, ಸಂಘದ ಎಲ್ಲಾ ನಿರ್ದೇಶಕರುಗಳು, ಎಂ. ಎಲ್. ಶಿವಕುಮಾರ್, ಅಟ್ಟೂರು ವೆಂಕಟೇಶಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.








