Gowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಇಕೋ ಕ್ಲಬ್ ಕಾರ್ಯ ಚಟುವಟಿಕೆ ಅಂಗವಾಗಿ ಪರಿಸರ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಪರಿಸರ ಪ್ರೇಮಿ ಶಿಡ್ಲಘಟ್ಟದ ಉಲ್ಲೂರುಪೇಟೆಯ ಅನಿಲ್ ಕುಮಾರ್ ಮಾತನಾಡಿದ ಅವರು, “ಪರಿಸರದ ಬಗ್ಗೆ ಕೇವಲ ಮಾತನಾಡಿದರೆ ಸಾಲದು, ಮಕ್ಕಳಾದ ನೀವು ನೂರಾರು ಸಸಿಗಳನ್ನು ನೆಟ್ಟು ಅವುಗಳನ್ನು ಜೋಪಾನಮಾಡಿ ಪೋಷಿಸಿ ಉಳಿಸಬೇಕು. ಅದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ನಾನು ಕೂಡ ಅವಕಾಶ ಸಿಕ್ಕಕಡೆ ಈ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದೇನೆ. ಶಿಡ್ಲಘ ಟ್ಟ ಮತ್ತು ಹಲವು ಕಡೆ ನೂರಾರು ಸಸಿಗಳನ್ನು ನೆಟ್ಟು ಪೋಷಿಸಿರುವುದು ನನಗೆ ತೃಪ್ತಿ ಕೊಟ್ಟಿದೆ. ಪರಿಸರ ರಕ್ಷಣೆ ನಮ್ಮೆಲ್ಲ ಹೊಣೆ” ಎಂದರು.
ಈ ಸಂದರ್ಭದಲ್ಲಿ ಅವರು ಶಿಡ್ಲಘಟ್ಟದ ರೈಲ್ವೆಗೆ ಸೇರಿರುವ ಸುಮಾರು 15 ಎಕರೆ ಭೂಮಿಯಲ್ಲಿ 2019 ರಿಂದ ಪ್ರಾರಂಭಿಸಿ ಗಿಡಗಳನ್ನು ನೆಟ್ಟು ಪೋಷಿಸಿದ ರೀತಿ, ಅದಕ್ಕೆ ಸಹಕಾರ ನೀಡಿದವರ ಬಗ್ಗೆ ಹಾಗೂ ಈಗ ಆ ಗಿಡಗಳು ಮರಗಳಾಗಿ ನಗರದ ಹೃದಯಭಾಗದಲ್ಲಿ ಶ್ವಾಸಕೋಶದ ಕೇಂದ್ರದಂತೆ ಹಸಿರುವನವಾಗಿ ನಳನಳಿಸುತ್ತಿರುವುದರ ಬಗ್ಗೆ ವಿವರಿಸಿದರು.
ಶಾಲೆಯ ಇಕೋ ಕ್ಲಬ್ ಚಟುವಟಿಕೆ ಅಂಗವಾಗಿ ನಡೆದ ಚಿತ್ರಕಲೆ, ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು. ಅನಿಲ್ ಕುಮಾರ್, ಸುಪ್ರಿತ ದಂಪತಿ ಮತ್ತು ಮಗಳು ಪ್ರಿಶಾ ಪ್ರಕೃತಿ, ಶಾಲೆಯ 200 ಮಕ್ಕಳಿಗೆ ಲಾಡು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಎಂ.ದೇವರಾಜ, ಇಕೋ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕಿ ಎಸ್.ಎ.ನಳಿನಾಕ್ಷಿ, ಶಿಕ್ಷಕರಾದ ವಿ.ಪ್ರಭಾಕರ, ವಿ.ಎಂ.ಮಂಜುನಾಥ, ಎಚ್. ಕೃಪಾ, ಬಿ.ಸುಪ್ರಿಯಾ, ಶಾಮಲಾ, ಶ್ವೇತ ಹಾಜರಿದ್ದರು.








