Sidlaghatta : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮರಗಳು, ಚಿಟ್ಟೆಗಳು ಮತ್ತು ವಿವಿಧ ಪ್ರಕೃತಿ ರೂಪದ ವೇಷಭೂಷಣಗಳನ್ನು ಧರಿಸಿ ಗಮನ ಸೆಳೆದರು. ಸಣ್ಣ ಮಕ್ಕಳ ಈ ಕಲಾತ್ಮಕ ವೇಷಗಳು ಪರಿಸರದ ಮೇಲಿನ ಕಾಳಜಿಯನ್ನು ಎತ್ತಿ ತೋರಿಸಿದವು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಒಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ತಾಲ್ಲೂಕು ಕಚೇರಿ ಮತ್ತು ಬಸ್ ನಿಲ್ದಾಣದ ಬಳಿ ನಡೆದ ವಿಶೇಷ ಅಭಿಯಾನದಲ್ಲಿ, ವಿದ್ಯಾರ್ಥಿಗಳು “ಮರಗಳನ್ನು ನೆಡಿ, ಮಕ್ಕಳನ್ನು ಉಳಿಸಿ, ಪಕ್ಷಿಗಳನ್ನು ರಕ್ಷಿಸಿ ಹಾಗೂ ಪ್ರಕೃತಿಯನ್ನು ಕಾಪಾಡಿ” ಎಂಬ ಘೋಷಣೆಗಳನ್ನು ಕೂಗಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಪ್ರಕೃತಿಯ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಶಿಕ್ಷಕವರ್ಗದವರಾದ ಮಂಜುನಾಥ್ ಡಿ., ರೂಪಾ ಕೆ., ಶಿವರಾಜ್ ಆರ್., ಪದ್ಮಲತಾ, ರಜಿನಿ, ರಶ್ಮಿ, ವಹೀದಾ, ಲಕ್ಷ್ಮಿ, ಫಾತಿಮಾ ಮತ್ತು ದೀಪಾ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮಕ್ಕಳ ಪರಿಸರ ಕಾಳಜಿಯ ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು.








